ಈ ಸಲ ಬಯ್ಯಿಸಿಕೊಳ್ಳುವ ಸರದಿ ಜಯಲಲಿತಾರದು
ನವದೆಹಲಿ : ಕಾವೇರಿ ನೀರು ಹಂಚಿಕೆ ಕುರಿತ ಪ್ರಕರಣದಲ್ಲಿ ಇದೇ ಮೊದಲ ಬಾರಿಗೆ ತಮಿಳುನಾಡು ಮುಖ್ಯಮಂತ್ರಿ ಕುಮಾರಿ ಜಯಲಲಿತಾ ಅವರ ನಡವಳಿಕೆಯನ್ನು ತರಾಟೆಗೆ ತೆಗೆದುಕೊಂಡಿರುವ ಸುಪ್ರಿಂಕೋರ್ಟ್- ಪ್ರಾಧಿಕಾರದ ವಿರುದ್ಧದ ಟೀಕೆಗಳನ್ನು ವಾಪಸ್ಸು ಪಡೆಯುವಂತೆ ಜಯಲಲಿತಾ ಅವರಿಗೆ ತಾಕೀತು ಮಾಡಿದೆ.
ಕಾವೇರಿ ನದಿ ಪ್ರಾಧಿಕಾರದ ಕಾರ್ಯ ಕಲಾಪಗಳ ಕುರಿತು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಪ್ರಧಾನಿ ವಾಜಪೇಯಿ ಅವರಿಗೆ ಜಯಲಲಿತಾ ಅವರು ಬರೆದಿರುವ ಪತ್ರದ ಕುರಿತು ಸುಪ್ರಿಂಕೋರ್ಟ್ನ ನ್ಯಾಯಪೀಠ ಶುಕ್ರವಾರ (ನ.15)ದ ವಿಚಾರಣೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ನಾಲ್ಕು ದಿನಗಳಲ್ಲಿ ಪ್ರಾಧಿಕಾರದ ಕುರಿತ ಆಕ್ಷೇಪಗಳನ್ನು ವಾಪಸ್ಸು ಪಡೆಯುವಂತೆ ನ್ಯಾಯಮೂರ್ತಿ ವೈ.ಕೆ.ಸಬರ್ವಾಲ್ ನೇತೃತ್ವದ ಮೂವರು ಸದಸ್ಯರ ನ್ಯಾಯಪೀಠ ತಮಿಳುನಾಡು ಮುಖ್ಯಮಂತ್ರಿಗೆ ತಿಳಿಸಿತು.
ಪ್ರಾಧಿಕಾರದ ಬಗ್ಗೆ ತಮ್ಮ ನಂಬಿಕೆಯನ್ನು ವ್ಯಕ್ತಪಡಿಸಿ ಮುಖ್ಯಮಂತ್ರಿ ಜಯಲಲಿತಾ ಅವರು ಅತ್ಯಂತ ತ್ವರಿತವಾಗಿ ಪ್ರಧಾನಿ ಅವರಿಗೆ ಪತ್ರ ಬರೆಯಲಿದ್ದಾರೆ ಎಂದು ನ್ಯಾಯಪೀಠದ ಆಕ್ಷೇಪಗಳಿಗೆ ಉತ್ತರಿಸಿದ ತಮಿಳುನಾಡು ಪರ ವಕೀಲ ಕೆ.ಕೆ.ವೇಣುಗೋಪಾಲ್ ಹೇಳಿದರು.
(ಪಿಟಿಐ)
ಮುಖಪುಟ / ಕಾವೇರಿ ಕನ್ನಡಿ