ರೈತರ ಆರೋಗ್ಯ ವಿಮಾ ಯೋಜನೆ ‘ಯಶಸ್ವಿನಿ’
ಬೆಂಗಳೂರು : ರೈತರಿಗಾಗೇ ಮೀಸಲಾದ ದೇಶದಲ್ಲೇ ಪ್ರಥಮ ಎನಿಸಿರುವ ಆರೋಗ್ಯ ವಿಮಾ ಯೋಜನೆ ‘ಯಶಸ್ವಿನಿ’ಯನ್ನು ಮಕ್ಕಳ ದಿನಾಚರಣೆಯ ದಿನ ಕರ್ನಾಟಕ ಸರ್ಕಾರ ಜಾರಿಗೆ ತರಲಿದೆ.
ಸಹಕಾರಿ ಸಂಘ- ಸಂಸ್ಥೆಗಳ ಸದಸ್ಯ ರೈತರು ಹಾಗೂ ಅವರ ಕುಟುಂಬ ವರ್ಗದವರು ಹೊಸ ವಿಮಾ ಯೋಜನೆಯ ವ್ಯಾಪ್ತಿಗೆ ಬರುತ್ತಾರೆ. ಈ ವಿಶೇಷ ಯೋಜನೆಯಲ್ಲಿ ರೈತರು ತಲಾ 5 ರುಪಾಯಿ ವಾರ್ಷಿಕ ಪ್ರೀಮಿಯಂ ಭರಿಸಬೇಕು. ಸರ್ಕಾರ ಕೂಡ ಪ್ರೀಮಿಯಂ ಭರಿಸಲಿದೆ ಎಂದು ಸಹಕಾರಿ ಸಚಿವ ಎಚ್.ವಿಶ್ವನಾಥ್ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು. ಆದರೆ ಸರ್ಕಾರ ಭರಿಸಲಿರುವ ಪ್ರೀಮಿಯಂ ಎಷ್ಟೆಂಬುದನ್ನು ಅವರು ಹೇಳಲಿಲ್ಲ.
ಸರ್ಕಾರವು ರಾಜ್ಯದ ಒಟ್ಟು 40 ಸರ್ಕಾರಿ ಆಸ್ಪತ್ರೆಗಳನ್ನು ಗುರ್ತಿಸಿದ್ದು, ಈ ಆಸ್ಪತ್ರೆಗಳು ವಿಮಾ ಯೋಜನೆಯ ಜಾಲಕ್ಕೆ ಸೇರುತ್ತವೆ. ಸಣ್ಣ ರೋಗದಿಂದ ಹಿಡಿದು ದೊಡ್ಡ ಶಸ್ತ್ರ ಚಿಕಿತ್ಸೆಯವರೆಗೆ ವಿಮೆಯ ವ್ಯಾಪ್ತಿಗೆ ಬರುವ ರೈತರಿಗೆ ಉಚಿತ ಆರೋಗ್ಯ ಸೇವೆ ಲಭಿಸಲಿದೆ. ಯೋಜನೆಯ ಮೊದಲ ಹಂತದಲ್ಲಿ 1 ಲಕ್ಷ ರೈತರಿಗೆ ಈ ಸೇವೆ ಒದಗಿಸಲಾಗುವುದು. ಹಂತಹಂತವಾಗಿ ಒಟ್ಟು 50 ಲಕ್ಷ ರೈತರನ್ನು ಈ ವಿಮಾ ಯೋಜನೆಯ ಜಾಲದಡಿ ತರುವ ಉದ್ದೇಶವಿದೆ ಎಂದು ವಿಶ್ವನಾಥ್ ಹೇಳಿದರು.
(ಪಿಟಿಐ)
ಮುಖಪುಟ / ಕಾವೇರಿ ಕನ್ನಡಿ