ಮಣಿ ಜಾಮೀನು ವಿಚಾರಣೆ ನವೆಂಬರ್18ಕ್ಕೆ
ಬೆಂಗಳೂರು: ಕೊಳತ್ತೂರು ಮಣಿ ಜಾಮೀನು ವಿಚಾರಣೆಯನ್ನು ರಾಜ್ಯ ಹೈಕೋರ್ಟ್ ನವೆಂಬರ್ 18ಕ್ಕೆ ಮುಂದೂಡಿದೆ. ಇದರಿಂದ ಅಪಹೃತ ಮಾಜಿ ಸಚಿವ ನಾಗಪ್ಪ ಅವರ ಬಿಡುಗಡೆಗಾಗಿ ವೀರಪ್ಪನ್ ಬಳಿಗೆ ಮಣಿಯನ್ನು ಸಂಧಾನಕಾರನನ್ನಾಗಿ ಕಳುಹಿಸುವ ಪ್ರಕ್ರಿಯೆ ಮತ್ತಷ್ಟು ತಡವಾಗಲಿದೆ.
ಜಾಮೀನು ಕೋರಿ ಮಣಿ ಪರ ವಕೀಲರು ಸಲ್ಲಿಸಿದ ಅರ್ಜಿ ವಿಚಾರಣೆಯನ್ನು ಗುರುವಾರ ನಡೆಸಿದ ನ್ಯಾಯಾಧೀಶ ಶ್ರೀಧರ್, ಮುಂದಿನ ವಿಚಾರಣೆಯನ್ನು ನ. 18ಕ್ಕೆ ಮುಂದೂಡಿದರು. ಐದು ಕೇಸುಗಳನ್ನು ಎದುರಿಸುತ್ತಿರುವ ಮಣಿ ಟಾಡಾಕ್ಕೆ ಸಂಬಂಧಿಸಿದ ಕೇಸಿನಲ್ಲಿ ಈಗಾಗಲೇ ಮೈಸೂರು ಕೋರ್ಟಿನಲ್ಲಿ ಜಾಮೀನು ಪಡೆದಿದ್ದಾರೆ. ಇನ್ನುಳಿದ ನಾಲ್ಕು ಕೇಸುಗಳನ್ನು ಮಣಿ ಎದುರಿಸಬೇಕಾಗಿದೆ.
ನ.4ರಂದು ನರಹಂತಕ ವೀರಪ್ಪನ್ ಕಳುಹಿಸಿರುವ ನಾಲ್ಕನೇ ಕ್ಯಾಸೆಟ್ನಲ್ಲಿ ಕೊಳೆತ್ತೂರು ಮಣಿ ಅಥವಾ ಸಚಿವ ರಾಜೂಗೌಡರನ್ನು ಸಂಧಾನಕ್ಕಾಗಿ ಕಾಡಿಗೆ ಕಳುಹಿಸುವಂತೆ ಕೋರಿದ್ದ. ಆದರೆ ಸರಕಾರಿ ಉದ್ಯೋಗಿಗಳನ್ನಾಗಲೀ, ಸಚಿವರನ್ನಾಗಲೀ ಸಂಧಾನಕ್ಕಾಗಿ ವೀರಪ್ಪನ್ ಬಳಿ ಕಳುಹಿಸುವುದಿಲ್ಲ ಎಂದು ರಾಜ್ಯಸರಕಾರ ತೀರ್ಮಾನ ಕೈಗೊಂಡಿದೆ.
ಈ ನಡುವೆ ಮಾಜಿ ಸಚಿವ ನಾಗಪ್ಪ ಅವರ ಪತ್ನಿ ಪರಿಮಳಾ, ಕಳೆದ 75 ದಿನಗಳಿಂದ ವೀರಪ್ಪನ್ ಸೆರೆಯಲ್ಲಿರುವ ತಮ್ಮ ಪತಿಯ ಬಿಡುಗಡೆಗಾಗಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಬಳಿ ಮನವಿ ಮಾಡಿಕೊಂಡಿದ್ದಾರೆ. ತಮಿಳುನಾಡು ಸರಕಾರ ವೀರಪ್ಪನ್ ಕಾರ್ಯಾಚರಣೆಯನ್ನೂ ಸದ್ಯಕ್ಕೆ ನಿಲ್ಲಿಸಿದೆ.
(ಪಿಟಿಐ)
ಮುಖಪುಟ / ವೀರಪ್ಪನ್ ಶಿಕಾರಿ