ಪ್ರಾಧಿಕಾರಕ್ಕೆ ಕಾರ್ಯಸೂಚಿ ಬೇಕು -ಜಯಲಲಿತಾ
ಚೆನ್ನೈ: ಕಾವೇರಿ ಪ್ರಾಧಿಕಾರದ ಸಭೆಗೆ ಕನಿಷ್ಠ ಕಾರ್ಯಸೂಚಿ ನಿಗದಿಪಡಿಸಬೇಕು ಎಂದು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಪ್ರಧಾನಿ ವಾಜಪೇಯಿಯನ್ನು ಆಗ್ರಹಿಸಿದ್ದಾರೆ.
ಕಾವೇರಿ ಬಿಕ್ಕಟ್ಟನ್ನು ಬಗೆಹರಿಸಲು ತಕ್ಷಣವೇ ಪ್ರಾಧಿಕಾರದ ಸಭೆಯ ಕರೆಯಬೇಕು ಎಂದು ಕರ್ನಾಟಕವು ಕೇಂದ್ರವನ್ನು ಆಗ್ರಹಿಸಿದ ಹಿನ್ನೆಲೆಯಲ್ಲಿ ಜಯಲಲಿತಾ ಕಾರ್ಯಸೂಚಿ ನಿಗದಿಪಡಿಸುವಂತೆ ಕೋರಿ ಪ್ರಧಾನಿಗೆ ಪತ್ರ ಬರೆದಿದ್ದಾರೆ.
ಯಾವ ಉದ್ದೇಶಕ್ಕಾಗಿ ಪ್ರಾಧಿಕಾರವನ್ನು ರಚಿಸಲಾಯಿತೋ ಆ ಉದ್ದೇಶವನ್ನು ಪ್ರಾಧಿಕಾರ ಮರೆತರೆ ಜನತೆಯೂ ಪ್ರಾಧಿಕಾರದ ಮೇಲಿನ ವಿಶ್ವಾಸ ಕಳೆದುಕೊಳ್ಳುತ್ತಾರೆ. ಸಮರ್ಥ ಕಾರ್ಯ ನಿರ್ವಹಿಸುವಲ್ಲಿ ವಿಫಲವಾಗಿರುವ ಪ್ರಾಧಿಕಾರ ಕರ್ನಾಟಕದತ್ತ ವಾಲಿದೆ ಎಂದು ಆರೋಪಿಸಿದರು.
ಪ್ರಾಧಿಕಾರದ ಸಭೆಯಲ್ಲಿ ತಮಿಳುನಾಡು ತನ್ನ ಅಗತ್ಯದ ಬಗ್ಗೆ ಲಿಖಿತರೂಪದಲ್ಲಿ ಹೇಳಿಕೆ ನೀಡಿದರೆ ಕರ್ನಾಟಕ ಬರೆಯ ಬಾಯಿ ಮಾತಿನಲ್ಲೇ ಎಲ್ಲವನ್ನೂ ಮುಗಿಸುತ್ತದೆ. ಮುಂದಿನ ಸಭೆಗಳಲ್ಲಿ ಇದು ಪುನರಾವರ್ತನೆಯಾಗಬಾರದು ಎಂದು ಜಯಲಲಿತಾ ತಮ್ಮ ಪತ್ರದಲ್ಲಿ ಎಚ್ಚರಿಸಿದ್ದಾರೆ.
(ಇನ್ಪೋ ವಾರ್ತೆ)
ಮುಖಪುಟ / ಕಾವೇರಿ ಕನ್ನಡಿ