ಆರ್ಟಿಪಿಎಸ್ ಮೋರೆಗೆ ವ್ಯರ್ಥ ಇದ್ದಿಲ ಮಸಿ
ರಾಯಚೂರು: ಕರ್ನಾಟಕ ವಿದ್ಯುತ್ ನಿಗಮದ ಗ್ರಹಚಾರ ಕೆಟ್ಟಿದೆ. ದಕ್ಷಿಣ ರಾಜ್ಯಗಳ ವಿದ್ಯುತ್ ಗ್ರಿಡ್ನಿಂದ ಹೆಚ್ಚು ವಿದ್ಯುತ್ ಬಳಸಿದ ತಪ್ಪಿಗೆ ದಂಡ ತೆರುವ ಪರಿಸ್ಥಿತಿ ಒಂದೆಡೆಯಾದರೆ, ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದಲ್ಲಿ , ಬಳಕೆಗೆ ಯೋಗ್ಯವಲ್ಲದ ಕಲ್ಲಿದ್ದಲು ವಿದ್ಯುತ್ ಘಟಕದ ಬಳಿ ರಾಶಿ ಬಿದ್ದು ವ್ಯರ್ಥವಾಗುತ್ತಿದೆ.
ಎರಡು ಗಣಿಗಳಿಂದ ರಾಯಚೂರು ವಿದ್ಯುತ್ ಸ್ಥಾವರಕ್ಕೆ ಪೂರೈಸುವ ಟನ್ಗಟ್ಟಲೆ ಕಲ್ಲಿದ್ದಲು ಬಳಕೆಗೆ ಅಯೋಗ್ಯವಾದುದು. ಈ ಇದ್ದಿಲು ಕ್ರಮೇಣ ಸುಟ್ಟು ಬೂದಿಯಾಗುತ್ತಿದೆ. ಇಂಥ ಕಲ್ಲಿದ್ದಲನ್ನು ಮತ್ತೆ ಮಾರಾಟ ಮಾಡುವುದರಿಂದ ಅಥವಾ ಬೇರೆ ಯಾವುದೇ ಕಾರ್ಯಗಳಿಗೆ ಬಳಸುವುದರಿಂದ ರಾಜ್ಯದ ಬೊಕ್ಕಸಕ್ಕೆ ಅಪಾರ ಹಾನಿಯಾಗುವುದು ತಪ್ಪಿದಂತಾಗುತ್ತದೆ. ಆದರೆ ಆರ್ಟಿಪಿಎಸ್ ಬಳಿ ಈ ಬಗ್ಗೆ ಯಾವುದೇ ಯೋಜನೆಗಳಿಲ್ಲ.
ಇದರಿಂದಾಗಿ ರಾಜ್ಯದ ಬೊಕ್ಕಸಕ್ಕೆ ಬರಬಹುದಾಗಿದ್ದ ಸುಮಾರು ಐದು ಕೋಟಿ ರೂಪಾಯಿ ಆದಾಯ ವ್ಯರ್ಥವಾಗಿ ಹೋಗುತ್ತಿದೆ. ಅತ್ತ ಮಾರಾಟವೂ ಇಲ್ಲದ, ಇತ್ತ ಬಳಕೆಯೂ ಆಗದೇ ರಾಶಿ ಬಿದ್ದಿರುವ ಕಲ್ಲಿದ್ದಲು ತಾಪ ಮಾನ ಹೆಚ್ಚಳದಿಂದ ಸುಟ್ಟು ಬೂದಿಯಾಗುತ್ತಿದೆ.
(ಇನ್ಫೋ ವಾರ್ತೆ)
ಮುಖಪುಟ / ಕಾವೇರಿ ಕನ್ನಡಿ