ಬಾಗಲಕೋಟೆಯಲ್ಲಿ 12,000 ಮನೆ ನೀರುಪಾಲು
ಬೆಂಗಳೂರು : ಬಾಗಲಕೋಟೆಯಲ್ಲಿ ಆಲಮಟ್ಟಿ ಅಣೆಕಟ್ಟು ಎತ್ತರಿಸಿರುವುದರಿಂದ ಜಲಾವೃತವಾಗಿರುವ 12,000 ಮನೆಗಳನ್ನು ಉರುಳಿಸಿ, ಅಲ್ಲಿನ ಜನರನ್ನು ಬಲವಂತವಾಗಿ ನವನಗರಕ್ಕೆ ಸ್ಥಳಾಂತರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ಆಲಮಟ್ಟಿ ಅಣೆಕಟ್ಟು ಎತ್ತರಿಸಿದ ನಂತರ ಮುಳುಗಡೆಯಾಗಿರುವ ಮನೆಗಳ ನಿರಾಶ್ರಿತರಿಗೆ ನವನಗರದಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ. ಆದರೆ 12 ಸಾವಿರ ಕುಟುಂಬಗಳು ಪರಿಹಾರದ ವ್ಯಾಪ್ತಿಗೆ ಬಂದರೂ, ತಮ್ಮ ಮನೆಗಳನ್ನು ಬಿಡಲು ಸಿದ್ಧರಿಲ್ಲ . ಈ ಹಟದಿಂದ ಇವರ ಆರೋಗ್ಯಕ್ಕೇ ಸಂಚಕಾರ ಒದಗುವ ಆಪತ್ತಿದೆ. ಹೀಗಾಗಿ ಈ ಮನೆಗಳನ್ನು ಉರುಳಿಸಿ, ಜನರನ್ನು ನವನಗರಕ್ಕೆ ವರ್ಗಾಯಿಸುವುದು ಅನಿವಾರ್ಯವಾಗಿದೆ ಎಂದು ಸಚಿವರು ಹೇಳಿದರು.
ರೈತ ಮಾರುಕಟ್ಟೆ ಉತ್ಪನ್ನಗಳ ಯಾರ್ಡ್ ಹೊರತು ಪಡಿಸಿ ಇಡೀ ಮಾರುಕಟ್ಟೆ ಈಗ ನವನಗರಕ್ಕೆ ಸ್ಥಳಾಂತರವಾಗಿದೆ. ಮುಳುಗಡೆಯ ಭೀತಿಯಲ್ಲೂ ಮೊಂಡುಹಿಡಿದಿರುವ ಜನರ ಪರಿಹಾರಕ್ಕೆ ಏನು ಮಾಡಬೇಕು ಎಂಬುದನ್ನು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಜೊತೆ ಚರ್ಚಿಸಿ, ನವೆಂಬರ್ 7 ಅಥವಾ 8ನೇ ತಾರೀಕಿನ ಹೊತ್ತಿಗೆ ಪೂರ್ಣ ಪ್ರಮಾಣದ ತೀರ್ಮಾನಕ್ಕೆ ಬರಲಿದ್ದೇವೆ ಎಂದರು.
(ಇನ್ಫೋ ವಾರ್ತೆ)
ಮುಖಪುಟ / ಕಾವೇರಿ ಕನ್ನಡಿ