ನ.15 ರಂದು ಕಾವೇರಿ ವಿಚಾರಣೆ ಮುಂದೂಡಿಕೆ
ನವದೆಹಲಿ : : ನವಂಬರ್ 6 ರವರೆಗೆ ತಮಿಳುನಾಡಿಗೆ ಪ್ರತಿದಿನ 9 ಸಾವಿರ ಕ್ಯುಸೆಕ್ಸ್ ನೀರು ಬಿಡಲು ಆದೇಶಿಸಿರುವ ಸುಪ್ರಿಂಕೋರ್ಟ್, ಮುಂದಿನ ವಿಚಾರಣೆಯನ್ನು ನವಂಬರ್ 15 ಕ್ಕೆ ಮುಂದೂಡಿದೆ.
ಶನಿವಾರ (ನ.1)ದ ಕಲಾಪದಲ್ಲಿ ಮೂವರು ಸದಸ್ಯರ ನ್ಯಾಯಪೀಠ ಅಂತಿಮ ತೀರ್ಪು ನೀಡುವ ನಿರೀಕ್ಷೆ ಸುಳ್ಳಾಗಿದ್ದು , ನವಂಬರ್ 15 ರಂದು ಕಾವೇರಿ ವಿಚಾರಣೆಯನ್ನು ನ್ಯಾಯಪೀಠ ಮತ್ತೆ ಕೈಗೆತ್ತಿಕೊಳ್ಳಲಿದೆ. ನ.6 ರವರೆಗೆ ತಮಿಳುನಾಡಿಗೆ ಪ್ರತಿದಿನ 9 ಸಾವಿರ ಕ್ಯುಸೆಕ್ಸ್ ನೀರು ಬಿಡುವಂತೆ ಆದೇಶ ನೀಡಿದ ನ್ಯಾಯಪೀಠ, ಆನಂತರ ಕಾವೇರಿ ನ್ಯಾಯಾಧಿಕರಣ ಗೊತ್ತುಪಡಿಸಿದ ಮಧ್ಯಂತರ ಆದೇಶವನ್ನು ಪಾಲಿಸುವಂತೆ ಕರ್ನಾಟಕಕ್ಕೆ ನಿರ್ದೇಶನ ನೀಡಿದೆ.
ಕರ್ನಾಟಕದ ವಿರುದ್ಧ ಕೈಗೊಳ್ಳಬೇಕಾದ ಕ್ರಮದ ಕುರಿತು ನ.15 ರ ವಿಚಾರಣೆಯಂದೇ ತೀರ್ಮಾನ ಕೈಗೊಳ್ಳಲಾಗುವುದು ಎಂದು ತ್ರಿಸದಸ್ಯ ಪೀಠದ ಮುಖ್ಯಸ್ಥ ಬಿ.ಎನ್.ಕ್ರಿಪಾಲ್ ತಿಳಿಸಿದರು.
ಕಾವೇರಿ ನದಿ ಪ್ರಾಧಿಕಾರವು ಶೀಘ್ರದಲ್ಲೇ ಸಭೆ ಸೇರುವ ಕುರಿತು ಆಶಾಭಾವನೆಯನ್ನು ವ್ಯಕ್ತಪಡಿಸಿರುವ ನ್ಯಾಯಪೀಠ, ಪ್ರಾಧಿಕಾರ ಸೂಕ್ತ ತೀರ್ಮಾನವನ್ನು ತ್ವರಿತವಾಗಿ ನೀಡುವ ಆಶಾಭಾವನೆಯನ್ನೂ ವ್ಯಕ್ತಪಡಿಸಿದೆ. ಯಾವುದೇ ನಿರ್ಧಾರವನ್ನು ಕೈಗೊಳ್ಳುವ ಮುನ್ನ , ನ್ಯಾಯಾಲಯದ ಆದೇಶಗಳನ್ನು ಗಮನಿಸುವಂತೆಯೂ ನ್ಯಾಯಪೀಠ ಪ್ರಾಧಿಕಾರಕ್ಕೆ ತಿಳಿಸಿದೆ. (ಪಿಟಿಐ)
ಮುಖಪುಟ / ಕಾವೇರಿ ಕನ್ನಡಿ