ಕೃಷ್ಣರ ಪಕ್ಕದ ಮನೆಯಾತ ಏನಂತಾನೆ ಗೊತ್ತಾ ..
ಮದ್ದೂರು ಹದಿನೈದು ದಿನಗಳ ಹಿಂದಷ್ಟೇ ತಮ್ಮೂರ ನಾಯಕ ನೀರಿಗಾಗಿ ಪಾದಯಾತ್ರೆ ಬಂದ ಎಂದು ಬೃಹತ್ ಬ್ಯಾನರ್ಗಳನ್ನು ಗಾಳಿಯಲ್ಲಿ ಆಡಿಸಿ, ಸ್ವಾಗತ ಕೋರಿದ್ದ ಸೋಮನಹಳ್ಳಿ ಈಗ ಮುಖ್ಯಮಂತ್ರಿ ಕೃಷ್ಣ ಹೆಸರು ಕೇಳಿದರೇ ಕೆಂಡಾಮಂಡಲಾಗುತ್ತಿದೆ !
ಕೃಷ್ಣ ತವರಿನ ಜನರಲ್ಲಿ ತಮಗೇ ಅವಮಾನವಾಗಿರುವ ಭಾವ. ಮುಖ್ಯಮಂತ್ರಿಗಳ ಊರು ಸೋಮನಹಳ್ಳಿಯ ಪಕ್ಕದ ಮನೆಯ ಎಸ್.ಕೆ.ಶಿವಲಿಂಗಯ್ಯ ಹೀಗಂತಾರೆ- ‘ಮುಖ್ಯಮಂತ್ರಿಗಳು ಪಾದಯಾತ್ರೆ ಕೈಗೊಂಡಾಗ ನೂರು ಜನ ನೂರು ಮಾತಂದ್ರು. ಇದು ಗಿಮಿಕ್ಸು, ರಾಜಕೀಯ ಲಾಭ ಹಾಗೆ ಹೀಗೆ ಅಂತೆಲ್ಲಾ ಅಂದ್ರಿ. ಆದರೆ ನಾನು ಆ ಮಾತನ್ನು ನಂಬಲಿಲ್ಲ. ನಮ್ಮ ಮುಖ್ಯಮಂತ್ರಿ ತಮ್ಮೂರಿನ ಜನಕ್ಕೆ ಮೋಸ ಮಾಡಲ್ಲ ಅಂತ ಸಿಕ್ಕಸಿಕ್ಕವರಿಗೆಲ್ಲಾ ಹೇಳಿದೆ. ಆದರಿವತ್ತು ನಮ್ಮ ಬೆನ್ನಿಗೇ ಚೂರಿ ಬಿದ್ದಿದೆ !’
ಬೀಚನಹಳ್ಳಿಯ ಪಂಚಾಯಿತಿ ಸದಸ್ಯ ಗುರುಸ್ವಾಮಿ ಮಾಡಿದ ಪ್ರಾಣಾರ್ಪಣೆ ಈಗ ನದಿಯಲ್ಲಿ ತೊಳಕೊಂಡು ಹೋದಂತಾಗಿದೆ. ಮುಖ್ಯಮಂತ್ರಿಗಳು ಆತನ ಬಲಿದಾನಕ್ಕಾದರೂ ಬೆಲೆ ಕೊಡಬೇಕಿತ್ತು ಎನ್ನುತ್ತಾರೆ ಶಿವಲಿಂಗಯ್ಯ.
ಸೋಮನಹಳ್ಳಿಯ ಮಂದಿ ಈಗ ಹೊಟ್ಟೆ ಹೊರೆಯಲು ಶಿಂಶ ನದಿಯಲ್ಲಿ ಮರಳು ತೆಗೆಯುವ ಕೆಲಸದಲ್ಲಿ ತೊಡಗಿದ್ದಾರೆ. ಮಳೆ- ಬೆಳೆ ಚೆನ್ನಾಗಿದ್ದಾಗ ಚೆನ್ನಪಟ್ಟಣದವರು ಇಲ್ಲಿಗೆ ಬಂದು ದವಸ- ಧಾನ್ಯ ಖರೀದಿಸುತ್ತಿದ್ದರು. ಆದರೀಗ ಸೋಮನಹಳ್ಳಿಯವರೇ ಅಕ್ಕಿ ಕೊಳ್ಳುವ ಪರಿಸ್ಥಿತಿ ಬಂದೊದಗಿದೆ.
ತಮ್ಮ ಸ್ಥಿತಿಯ ಪೂರ್ಣ ವಿವರ ಮುಖ್ಯಮಂತ್ರಿಗಳಿಗೆ ಗೊತ್ತಿದ್ದರೂ, ಸುಪ್ರಿಂಕೋರ್ಟಿನ ಮೂಲಕ ತಮಿಳುನಾಡು ತಂದಿರುವ ಒತ್ತಡಕ್ಕೆ ಮಣಿದು ನೀರು ಬಿಟ್ಟಿರುವುದನ್ನು ಮಹಾ ಮೋಸ ಎನ್ನುತ್ತಾರೆ ಸೋಮನಹಳ್ಳಿಯ ಮಂದಿ.
(ಇನ್ಫೋ ವಾರ್ತೆ)
Post your Views
ಮುಖಪುಟ / ಕಾವೇರಿ ಕನ್ನಡಿ