ಬೆಂಗಳೂರಿನಲ್ಲಿ ನಿಷೇಧಾಜ್ಞೆ , ತಮಿಳ್ನಾಡು ಬಸ್ಸಿಗೆ ಕಲ್ಲು
ಬೆಂಗಳೂರು : ಕಾವೇರಿ ಚಳವಳಿ ಕಾವೇರುವ ಲಕ್ಷಣಗಳು ಕಾಣಿಸುತ್ತಿದ್ದಂತೆ ಮುಂಜಾಗ್ರತಾ ಕ್ರಮವಾಗಿ ಬೆಂಗಳೂರಿನಲ್ಲಿ ನಿಷೇಧಾಜ್ಞೆ ವಿಧಿಸಲಾಗಿದೆ.
144 ನೇ ಸೆಕ್ಷನ್ನ ಅನ್ವಯ ನಗರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಅ.29 ರ ಮಂಗಳವಾರ ಬೆಳಗ್ಗೆ 6 ರಿಂದ ಅಕ್ಟೋಬರ್ 31 ರಾತ್ರಿ 12 ರವರೆಗೆ ಮೂರು ದಿನಗಳ ಕಾಲ ನಿಷಾಧಾಜ್ಞೆ ಜಾರಿಯಲ್ಲಿರುತ್ತದೆ ಎಂದು ಪೊಲೀಸ್ ಇಲಾಖೆ ಪ್ರಕಟಣೆ ತಿಳಿಸಿದೆ.
ರೈಲು ಸಂಚಾರ ರದ್ದು
ಬೆಂಗಳೂರು- ಮೈಸೂರು ನಡುವಣ ರೈಲು ಸಂಚಾರ ಕಾವೇರಿ ಚಳವಳಿ ಹಿನ್ನೆಲೆಯಲ್ಲಿ ಮಂಗಳವಾರವೂ ರದ್ದಾಗಿದೆ. ರೈತರ ಪ್ರತಿಭಟನೆಯಿಂದಾಗಿ ಬಸ್ಸು ಸಂಚಾರ ಕೂಡ ಅಸ್ತವ್ಯಸ್ತವಾಗಿದೆ. ಮಂಡ್ಯದಲ್ಲಿ ಬಸ್ಸುಗಳನ್ನು ತಡೆದ ನಂತರ, ಬೆಂಗಳೂರು ಮೈಸೂರು ನಡುವಿನ ಬಸ್ಸುಗಳನ್ನು ಸಂಚಾರದಿಂದ ವಾಪಾಸು ಪಡೆಯಲಾಗಿದೆ ಎಂದು ಕೆಎಸ್ಸಾರ್ಟಿಸಿ ಮೈಸೂರು ನಗರ ವಿಭಾಗ ನಿಯಂತ್ರಕ ಚಿನ್ನಸ್ವಾಮಿ ತಿಳಿಸಿದ್ದಾರೆ.
ತಮಿಳುನಾಡಿಗೆ ಬಸ್ಸಿಗೆ ಕಲ್ಲು
ಕಲ್ಲು ತೂರಿ ತಮಿಳುನಾಡಿನ ಬಸ್ಸೊಂದನ್ನು ಜಖಂಗೊಳಿಸಲು ಕೆಲವು ಉದ್ರಿಕ್ತರು ಯತ್ನಿಸಿದ ಘಟನೆ ಬೆಂಗಳೂರಿನ ಕಾಟನ್ಪೇಟೆಯಲ್ಲಿ ಸೋಮವಾರ ರಾತ್ರಿ (ಅ.28) ನಡೆದಿದೆ. ತಮಿಳುನಾಡಿನಿಂದ ಆಗಮಿಸಿದ ಬಸ್ಸೊಂದು ಮೆಜೆಸ್ಟಿಕ್ ಕಡೆ ಹೋಗುತ್ತಿದ್ದಾಗ, ಕೆಲವು ಮಂದಿ ಕಲ್ಲು ತೂರಿದರು. ಈ ಘಟನೆಯಲ್ಲಿ ಬಸ್ಸಿನ ಮುಂಭಾಗದ ಗಾಜು ಪುಡಿಯಾಗಿದೆ.
(ಇನ್ಫೋ ವಾರ್ತೆ)
Post your Views
ಮುಖಪುಟ / ಕಾವೇರಿ ಕನ್ನಡಿ