ಕರ್ನಾಟಕದ ಗಡಿಯಲ್ಲಿ ಆಂಧ್ರ ಅಕ್ಕಿ ಮಾರಾಟ
ರಾಯಚೂರು: ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಪರಿಹಾರ ಕಾಮಗಾರಿಗಾಗಿ ರಾಜ್ಯ ಸರಕಾರ ರೂಪಿಸಿದ ಯೋಜನೆ ದುರ್ಬಳಕೆಯಾಗುತ್ತಿದೆ. ಕೂಲಿಗಾಗಿ ಕಾಳು ಯೋಜನೆಯಡಿ ಕರ್ನಾಟಕ ಸರಕಾರ ವಿತರಿಸಬೇಕಾದ ಅಕ್ಕಿಯ ಬದಲಿಗೆ ಆಂಧ್ರ ಪ್ರದೇಶದಿಂದ ಕಳ್ಳ ಸಾಗಾಣಿಕೆ ಮೂಲಕ ಬಂದ ಅಕ್ಕಿಯನ್ನು ವಿತರಿಸುತ್ತಿರುವುದು ಪತ್ತೆಯಾಗಿದೆ. ರಾಜ್ಯ ಸರಕಾರದ ಬಿಡುಗಡೆ ಮಾಡಿದ ದವಸ ಧಾನ್ಯಗಳ ಬದಲಿಗೆ ಆಂಧ್ರದ ಅಕ್ಕಿ ಮಾರಾಟವಾಗುತ್ತಿರುವುದರಿಂದ ರಾಜ್ಯದ ಬೊಕ್ಕಸಕ್ಕೆ ಅಪಾರ ನಷ್ಟವುಂಟಾಗಿದೆ.
ಆಂಧ್ರದಿಂದ ಪ್ರತಿದಿನ ಸುಮಾರು 10 ಲೋಡುಗಳಷ್ಟು ಅಕ್ಕಿ, ಗೋಧಿಯನ್ನು ಕಳ್ಳ ಸಾಗಣೆ ಮೂಲಕ ಕರ್ನಾಟಕ ಗಡಿ ಪ್ರದೇಶಕ್ಕೆ ತಂದು ಮಾರಾಟ ಮಾಡಲಾಗುತ್ತಿದೆ. ಭಾರತ ಆಹಾರ ನಿಗಮದಿಂದ ಪಡೆದ ಕಾಳನ್ನು ಲೋಡ್ಗೆ 1. 5 ಲಕ್ಷ ರೂಪಾಯಿ ಲಾಭವಿಟ್ಟು ಮಾರಾಟ ಮಾಡಲಾಗುತ್ತಿದೆ.
ಕಳೆದ ವರ್ಷ ಅಂತರ ರಾಜ್ಯ ಅಕ್ಕಿ ಸಾಗಾಣೆಗೆ ರಹದಾರಿಯ ಅವಶ್ಯವಿದ್ದಾಗ ಆಂಧ್ರದ ಅಕ್ಕಿಯನ್ನು ಕರ್ನಾಟಕಕ್ಕೆ ಸಾಗಿಸಲು ಮುಕ್ತ ಅವಕಾಶ ನೀಡಲಾಗಿತ್ತು. ಈ ವ್ಯವಸ್ಥೆಯ ದುರ್ಲಾಭ ಪಡೆಯುತ್ತಿರುವ ವರ್ತಕರು ಕರ್ನಾಟಕ ಸರಕಾರಕ್ಕೆ ಮೋಸವೆಸಗುತ್ತಿದ್ದಾರೆ.
ಪ್ರಸ್ತುತ ಮಂತ್ರಾಲಯದ ಪೊಲೀಸರು ಆಂಧ್ರದ ಅಕ್ಕಿ ನಮ್ಮ ರಾಜ್ಯದ ಗಡಿಯಲ್ಲಿ ಮಾರಾಟವಾಗುತ್ತಿರುವ ಬಗ್ಗೆ ರಾಯಚೂರು ತಾಲ್ಲೂಕಿನ ಇಡಪನೂರು ಪೊಲೀಸರಿಗೆ ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ.
(ಇನ್ಫೋ ವಾರ್ತೆ)
Post your Views
ಮುಖಪುಟ / ಕಾವೇರಿ ಕನ್ನಡಿ