ಐಟಿಯಲ್ಲಿ ಸಮಗ್ರತೆ ನಮ್ಮ ಗುರಿಯಾಗಲಿ : ಕಲಮ್
ಬೆಂಗಳೂರು: ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತವು ಕೇವಲ ಸಾಫ್ಟ್ವೇರ್ನ್ನು ಮಾತ್ರ ಅವಲಂಬಿಸಿದರೆ ಸಾಲದು. ಐಟಿಯಲ್ಲಿ ಸಮಗ್ರತೆಯನ್ನು ಸಾಧಿಸಬೇಕು ಎಂದು ರಾಷ್ಟ್ರಪತಿ ಎ. ಪಿ. ಜೆ. ಅಬ್ದುಲ್ ಕಲಮ್ ಅಭಿಪ್ರಾಯಪಟ್ಟಿದ್ದಾರೆ.
ಮಂಗಳವಾರ ನಗರದಲ್ಲಿ ಪ್ರಾರಂಭವಾದ ಏಷ್ಯಾದ ಪ್ರತಿಷ್ಠಿತ ಐಟಿ ಮೇಳ ಬೆಂಗಳೂರು ಐಟಿ.ಕಾಂ ಉದ್ಘಾಟಿಸಿ ಕಲಮ್ ಮಾತನಾಡುತ್ತಿದ್ದರು. ಹಾರ್ಡ್ ವೇರ್ , ಎಂಬೆಡೆಡ್ ಸಿಸ್ಟಮ್, ಡಿಸೈನ್ ಸೇರಿದಂತೆ ಸಮಗ್ರ ಐಟಿ ಸೊಲ್ಯೂಷನ್ಸ್ ನೀಡುವ ಸಮರ್ಥ ರಾಷ್ಟ್ರ ಎಂದು ಭಾರತವು ಕರೆಸಿಕೊಳ್ಳಬೇಕು. ಸಾಫ್ಟ್ವೇರ್ ಮತ್ತು ಹಾರ್ಡ್ವೇರ್ ಉತ್ಪನ್ನಗಳಿಗೆ ಇನ್ನಷ್ಟು ಮೌಲ್ಯಗಳ ಸೇರ್ಪಡಿಸುವ ಮೂಲಕ ಜ್ಞಾನ ಉತ್ಪನ್ನಗಳನ್ನು ಜಗತ್ತಿಗೆ ನೀಡಬೇಕು ಎಂದು ಕಲಮ್ ಕರೆ ನೀಡಿದರು.
- ಭಾರತೀಯ ಐಟಿ ಕಂಪೆನಿಗಳು ಸೆ. 11ರ ಘಟನೆಯ ಬಳಿಕವೂ ತೀರಾ ಕೆಳಮಟ್ಟಕ್ಕೇನೂ ಕುಸಿಯಲಿಲ್ಲ.
- ದೈನಿಕ ಐಟಿ ಮಾರುಕಟ್ಟೆಯನ್ನು ಅಭಿವೃದ್ಧಿ ಪಡಿಸುವುದಲ್ಲದೆ ದೀರ್ಘಾವಧಿಯ ಐಟಿ ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕು. ಜಾರ್ಖಂಡ್, ಬಿಹಾರ ರಾಜ್ಯಗಳಲ್ಲಿಯೂ ಐಟಿ ಅಭಿವೃದ್ಧಿಗೆ ಕಾರ್ಯಯೋಜನೆಗಳನ್ನು ರೂಪಿಸಬೇಕು.
- ಕೇವಲ ಆರ್ಥಿಕ ಸಬಲತೆಯ ಮೂಲಕವಷ್ಟೇ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರ ಎನಿಸಿಕೊಳ್ಳಬಹುದು. ಆರ್ಥಿಕ ಸಬಲತೆಗಾಗಿ ಸ್ಪರ್ಧೆ, ಜ್ಞಾನ ಶಕ್ತಿ ಮತ್ತು ಸಂಪನ್ಮೂಲದ ಅಗತ್ಯವಿದೆ.
- ಆರ್ಥಿಕ ಸಬಲತೆಗಾಗಿ ದೇಶಾದ್ಯಂತ ಜನರು ಬೆವರು ಸುರಿಸಿ ದುಡಿಯಬೇಕು. ರಾಜ್ಯಗಳು ಅಭಿವೃದ್ಧಿ ಹೊಂದಿದರೆ ತನ್ನಿಂತಾನೇ ದೇಶಕ್ಕೆ ಕೀರ್ತಿ ಬರುತ್ತದೆ. ಅದಕ್ಕಾಗಿ ಅಭಿವೃದ್ಧಿ ಮತ್ತು ಶಾಂತಿ ಜೊತೆ ಜೊತೆಯಾಗಿ ನಡೆಯಬೇಕು.
- ಪ್ರಗತಿಯಲ್ಲಿರುವ ಸೂಪರ್ ಹೈವೇ ಯೋಜನೆಗಳು ದೇಶದ ಹೆಮ್ಮೆಯೆನಿಸಲಿವೆ. ನದೀ ಜೋಡಣೆಯು ಇವತ್ತು ದೇಶದ ಅತ್ಯಗತ್ಯ ಯೋಜನೆಗಳಲ್ಲಿ ಒಂದು. ಇದರಿಂದ ಉತ್ತರದ ರಾಜ್ಯಗಳಲ್ಲಿ ನೆರೆ ಹಾವಳಿ ಹಾಗೂ ದಕ್ಷಿಣ ರಾಜ್ಯಗಳ ಕುಡಿಯುವ ನೀರಿನ ಅಗತ್ಯ ಪೂರೈಸಿದಂತಾಗುತ್ತದೆ.
ಬೆಂಗಳೂರು ಐಟಿ.ಕಾಂ ಮೇಳದಲ್ಲಿ ನ ‘ವಿದ್ಯಾರ್ಥಿಗಳ ಇಂಟರ್ನೆಟ್ ವಿಶ್ವ’ ಉದ್ಘಾಟಿಸಿದ ರಾಷ್ಟ್ರಪತಿ ಕಲಮ್, ಕಂಪ್ಯೂಟರ್ ಕಲಿಕೆ ಪ್ರಾರಂಭಿಸಿದ ಸುಮಾರು 600 ಮಕ್ಕಳೊಂದಿಗೆ ಕೆಲ ಕಾಲ ಕಳೆದರು.
ಪೂರಕ
ಓದಿಗೆ-
ಮುಖಪುಟ
/
ಕರ್ನಾಟಕ
ಸಿಲಿಕಾನ್
ಕಣಿವೆ