ಗಣಿಗಾರಿಕೆ ನಿಲ್ಲಿಸಬೇಕೆಂಬ ಕೂಗಿಗೆ ಕೋರ್ಟ್ ಸಹಮತ
ಬೆಂಗಳೂರು: ಇನ್ನೆರಡು ವರ್ಷದೊಳಗಾಗಿ ಕುದುರೆಮುಖ ಗಣಿಗಾರಿಕೆಯನ್ನು ನಿಲ್ಲಿಸಬೇಕು ಎಂಬ ವಾಲ್ಮೀಕಿ ಥಾಪರ್ ಸಮಿತಿ ಶಿಫಾರಸ್ಸುಗಳನ್ನು ಸುಪ್ರಿಂ ಕೋರ್ಟ್ ಬೆಂಬಲಿಸುವುದರೊಂದಿಗೆ ಪರಿಸರ ಹೋರಾಟಕ್ಕೆ ಜಯ ಸಂದಂತಾಗಿದೆ.
ಪಶ್ಚಿಮ ಘಟ್ಟದ ಮೇಲಿನ ಗಣಿಗಾರಿಕೆ ದುಷ್ಪರಿಣಾಮ ವಿರುದ್ಧ ಪರಿಸರವಾದಿಗಳು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಬಿ. ಎನ್. ಕೃಪಾಲ್, ನ್ಯಾಯಮೂರ್ತಿಗಳಾದ ಸಬರವಾಲ್ ಹಾಗೂ ಅರಿಜಿತ್ ಪಸಾಯತ್ ಅವರನ್ನೊಳಗೊಂಡ ನ್ಯಾಯಪೀಠ ಈ ತೀರ್ಪು ನೀಡಿದೆ.
ಸಮಿತಿಯ ಶಿಫಾರಸ್ಸಿನಂತೆ 2004ರೊಳಗೆ ಗಣಿಗಾರಿಕೆ ನಿಲ್ಲಿಸಬೇಕು. ಅಲ್ಲದೆ ಕಬ್ಬಿಣ ಅದಿರು ಕಂಪೆನಿಯನ್ನು ಮುಚ್ಚಬೇಕು ಎಂದು ಕೋರ್ಟ್ ಹೇಳಿದೆ. ಗಣಿಗಾರಿಕೆ ಅವಧಿಯನ್ನು 20 ವರ್ಷಗಳ ಕಾಲ ವಿಸ್ತರಿಸಲು ಆಸಕ್ತಿ ಹೊಂದಿದ್ದ ಕೇಂದ್ರ ಮತ್ತು ರಾಜ್ಯ ಸರಕಾರಗಳು ಈ ತೀರ್ಪಿನಿಂದಾಗಿ ಇಕ್ಕಟ್ಟಿನಲ್ಲಿ ಸಿಕ್ಕಿಬಿದ್ದಿವೆ. ಕೋರ್ಟ್ ತನ್ನ ತೀರ್ಪಿನ ಉಕ್ತಲೇಖನವನ್ನು ಗುರುವಾರ ನೀಡಲಿದೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...