‘ಪ್ರಾಣತ್ಯಾಗಕ್ಕೆ ಅಂಜದ ಯುವಕರು ದೇಶಕ್ಕೆ ಬೇಕು..’
ಭೋಪಾಲ್: ಪ್ರತಿಯಾಂದು ಸಮಾಜದಲ್ಲಿಯೂ ರಾಷ್ಟ್ರಕ್ಕಾಗಿ ಪ್ರಾಣ ತ್ಯಾಗ ಮಾಡಲು ಸಿದ್ಧರಾಗಿರುವ ಯುವಕರು ಇರಬೇಕು ಎಂದು ವಿಶ್ವ ಹಿಂದೂ ಪರಿಷತ್ನ ಅಂತರರಾಷ್ಟ್ರೀಯ ಉಪಾಧ್ಯಕ್ಷ ಆಚಾರ್ಯ ಗಿರಿರಾಜ ಕಿಶೋರ್ ಅಭಿಪ್ರಾಪಟ್ಟಿದ್ದಾರೆ.
ಹಿಂದೂ ಆತ್ಮಹತ್ಯಾ ದಳ ನಿರ್ಮಾಣಕ್ಕಾಗಿ ಬಾಳಾ ಠಾಕ್ರೆ ನೀಡಿದ ಕರೆಗೆ ಪ್ರತಿಕ್ರಿಯಿಸಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಗಿರಿರಾಜ ಕಿಶೋರ್ ಪ್ರತಿಕ್ರಿಯಿಸಿದರು. ಹೀಗೆ ರಾಷ್ಟ್ರಕ್ಕಾಗಿ ಪ್ರಾಣಾರ್ಪಣೆ ಮಾಡುವ ಯುವಕರು ಯಾರದೇ ವಿರುದ್ಧವಾಗಲೀ ಕೆಲಸ ಮಾಡಬೇಕಾಗಿಲ್ಲ. ಆದರೆ ಸಮಾಜವೊಂದರ ಒಳಿತಿಗಾಗಿ ಅಂತಹ ಯುವಜನರ ಸಮೂಹವೊಂದು ಇರುವುದು ಅತ್ಯಗತ್ಯ ಎಂದು ಕಿಶೋರ್ ಹೇಳಿದರು.
ಠಾಕ್ರೆ ನೀಡಿರುವ ಕರೆಯನ್ನು ನೇರವಾಗಿ ಸಮರ್ಥಿಸುವುದಕ್ಕೆ ಹಿಂಜರಿಯುತ್ತೀರೇಕೆ ಎಂಬ ಪ್ರಶ್ನೆಗೆ- ನಾನೇನು ಹೇಳಬೇಕೋ ಅದನ್ನು ಹೇಳಿದ್ದೇನೆ, ಉಳಿದಂತೆ ಅದನ್ನು ಅರ್ಥೈಸುವುದು ನಿಮಗೆ ಬಿಟ್ಟದ್ದು . ನಾನು ಠಾಕ್ರೆಯನ್ನು ಬೆಂಬಲಿಸುತ್ತೇನೆ ಅಂತ ನಿಮಗನಿಸಿದರೆ ಅಥವಾ ಬೆಂಬಲಿಸುತ್ತಿಲ್ಲ ಅಂತಲೂ ಅನಿಸಿದರೆ ನೀವು ಹಾಗೇ ಬರೆಯಬಹುದು ಎಂದು ಅವರು ಸುದ್ದಿಗಾರರಿಗೆ ಉತ್ತರಿಸಿದರು.
ದೇಶದಲ್ಲಿ ಶಾಶ್ವತವಾಗಿ ಶಾಂತಿ ನೆಲೆಸಬೇಕಿದ್ದರೆ ಹಿಂದೂ ಹಾಗೂ ಮುಸ್ಲಿಮರ ನಡುವೆ ವಿವರವಾದ ಚರ್ಚೆ, ಮಾತುಕತೆಗಳು ನಡೆಯಬೇಕು ಎಂದು ಗಿರಿರಾಜ ಕಿಶೋರ್ ಅಭಿಪ್ರಾಯ ಪಟ್ಟರು.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...