ನೋಟೀಸಿಗೆ ಉತ್ತರಿಸಲು ಇನ್ನೂ ಟೈಂ ಬೇಕು : ಕೃಷ್ಣ
ಬೆಂಗಳೂರು : ಕರ್ನಾಟಕದ ಮುಖ್ಯಮಂತ್ರಿ ಸೇರಿದಂತೆ ಮೂವರ ವಿರುದ್ಧ ತಮಿಳುನಾಡು ಸರ್ಕಾರ ಸಲ್ಲಿಸಿರುವ ನ್ಯಾಯಾಲಯ ನಿಂದನೆ ಅರ್ಜಿಗೆ ಉತ್ತರ ಕೊಡಲು ಸುಪ್ರಿಂಕೋರ್ಟ್ನಿಂದ ಇನ್ನೂ ಹೆಚ್ಚು ಅವಧಿ ಕೋರಲು ಕರ್ನಾಟಕ ನಿರ್ಧರಿಸಿದೆ.
ಅಕ್ಟೋಬರ್ 24ರಂದು ಈ ಪ್ರಕರಣದ ವಿಚಾರಣೆ ಅಪೆಕ್ಸ್ ಕೋರ್ಟಿನಲ್ಲಿ ನಡೆಯಬೇಕಿದೆ. ಉತ್ತರ ಕೊಡಲು ಸಾಕಷ್ಟು ಕಾಲಾವಕಾಶಕ್ಕೆ ಅರ್ಜಿ ಹಾಕಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಡಿ.ಬಿ.ಚಂದ್ರೇಗೌಡ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.
ನ್ಯಾಯಾಲಯ ನಿಂದನೆ ಅರ್ಜಿಗೆ ಉತ್ತರ ಕೊಡುವಂತೆ ಸುಪ್ರಿಂಕೋರ್ಟ್ ಕಳಿಸಿದ ನೋಟೀಸು ತಲುಪಿದ್ದು ಅಕ್ಟೋಬರ್ 16ನೇ ತಾರೀಕು. ವಿಚಾರಣೆಗೆ ಕೇವಲ 8 ದಿನ ಉಳಿದಿದ್ದರಿಂದ ಸಕಾರಣ ಉತ್ತರ ಕೊಡಲು ಕಾಲಾವಕಾಶ ಸಾಕಾಗಲಿಲ್ಲ. ಅಕ್ಟೋಬರ್ 22ರೊಳಗೆ ಕೋರ್ಟಿಗೆ ಉತ್ತರ ಸಲ್ಲಿಸಬೇಕಿತ್ತು. ಈಗ ಅದು ಸಾಧ್ಯವಾಗಿಲ್ಲ ಎಂದು ಚಂದ್ರೇಗೌಡ ಹೇಳಿದರು.
ಮುಖ್ಯಮಂತ್ರಿ ಕೃಷ್ಣ , ಜಲ ಸಂಪನ್ಮೂಲ ಸಚಿವ ಎಚ್.ಕೆ.ಪಾಟೀಲ್ ಮತ್ತು ಮುಖ್ಯ ಕಾರ್ಯದರ್ಶಿ ಡಾ.ಎ.ರವೀಂದ್ರ- ಇವರಿಗೆ ನ್ಯಾಯಾಲಯ ನಿಂದನೆ ಅರ್ಜಿಗೆ ಉತ್ತರ ಕೊಡುವಂತೆ ಸುಪ್ರಿಂಕೋರ್ಟ್ ನೋಟೀಸು ಕೊಟ್ಟಿತ್ತು. ಪಾಟೀಲರು ಹಾಗೂ ಮುಖ್ಯಮಂತ್ರಿಗಳು ಉತ್ತರಕ್ಕೆ ಅಂತಿಮ ರೂಪು ಕೊಡಲು ಈಗ ದೆಹಲಿಯಲ್ಲಿದ್ದಾರೆ ಎಂದರು.
(ಪಿಟಿಐ)
ಮುಖಪುಟ / ಕಾವೇರಿ ಕನ್ನಡಿ