ರಾಜ್ಯದ ಬೊಕ್ಕಸ ನನ್ನ ಮಾವನದ್ದೇ ?-ಮುಖ್ಯಮಂತ್ರಿ ಪ್ರಶ್ನೆ
ಬೆಂಗಳೂರು: ಅಮೆರಿಕ ಮತ್ತು ಕರ್ನಾಟಕವನ್ನು ಸಮೀಕರಿಸಿರುವ ಮುಖ್ಯಮಂತ್ರಿ ಎಸ್ ಎಂ ಕೃಷ್ಣ, ನರಹಂತಕ ವೀರಪ್ಪನ್ ಬಂಧನ ಸಾಧ್ಯವಾಗದೇ ಇರುವುದನ್ನು ಟೀಕಿಸುತ್ತಿರುವವರನ್ನು ತರಾಟೆಗೆ ತೆಗೆದುಕೊಂಡರು.
ಅಮೆರಿಕಾಕ್ಕೆ ಇದುವರೆಗೆ ಒಸಾಮಾ ಬಿನ್ ಲ್ಯಾಡೆನ್ನ್ನು ಹಿಡಿಯುವುದು ಸಾಧ್ಯವಾಗಲಿಲ್ಲ. ನಾವು ಹೇಗೆ ವೀರಪ್ಪನ್ನ್ನು ಹಿಡಿಯುವುದು ಸಾಧ್ಯ? ಕಳೆದೆರಡು ತಿಂಗಳಿನಿಂದ ಮಾಜಿ ಸಚಿವ ನಾಗಪ್ಪ ಅವರನ್ನು ಸೆರೆಯಲ್ಲಿಟ್ಟುಕೊಂಡಿರುವ ವೀರಪ್ಪನ್ ಶಿಕಾರಿ ಪ್ರಯತ್ನಗಳು ಫಲ ನೀಡದೇ ಇರುವ ಹಿನ್ನೆಲೆಯಲ್ಲಿ - ನಗರದ ಸಮಾರಂಭವೊಂದರಲ್ಲಿ ಸೋಮವಾರ (ಅ.21) ಮಾತನಾಡುತ್ತಿದ್ದ ಕೃಷ್ಣ ಮೇಸಿನಂತೆ ಪ್ರತಿಕ್ರಿಯಿಸಿದರು.
ವೀರಪ್ಪನ್ ಜೀವಿಸುತ್ತಿರುವುದು 18 ಸಾವಿರ ಚದರ ಮೈಲಿ ವಿಸ್ತಾರದ ಕಾಡಿನಲ್ಲಿ. ಆ ಕಾಡಿಗೆ ಹೈವೇಗಳಿಲ್ಲ ಎಂದು ಕಟುವಾಗಿ ಹೇಳಿದ ಕೃಷ್ಣ ಪೊಲೀಸರು ದಟ್ಟಕಾಡಿನ ನಡುವೆ ದಾರಿ ಮಾಡಿಕೊಂಡು ಗುಂಪುಗಳಲ್ಲಿ ವೀರಪ್ಪನ್ಗಾಗಿ ಹುಡುಕಾಡಬೇಕು. ಕಳೆದ ಬಾರಿ ಡಾ.ರಾಜ್ಕುಮಾರ್ ಅವರು ವೀರಪ್ಪನ್ ಸೆರೆಯಿಂದ ಸುರಕ್ಷಿತವಾಗಿ ಬಿಡುಗಡೆಯಾದರು. ರಾಜ್ ಬಿಡುಗಡೆಯ ಮೂಲಕ ರಾಜ್ಯದಲ್ಲಿ ಶಾಂತಿ ನೆಲೆಸಿರುವ ಬಗ್ಗೆ ನಿಟ್ಟುಸಿರು ಬಿಡುವ ಬದಲು ವೀರಪ್ಪನ್ಗೆ ಎಷ್ಟು ಲಂಚ ಕೊಟ್ಟಿದ್ದೀರಿ ಎಂಬ ಪ್ರಶ್ನೆ ಕೇಳಲಾರಂಭಿಸಿದರು. ರಾಜ್ಯದ ಬೊಕ್ಕಸವೇನು ನನ್ನ ಮಾವನದ್ದೇ ? ರಾಜ್ಯದ ಅಕೌಂಟೆಂಟ್ ಜನರಲ್ ಏನು ಮಾಯವಾಗಿ ಬಿಟ್ಟರೇ ...? ಎಂದು ಟೀಕಾಕಾರನ್ನು ಕೃಷ್ಣ ದಬಾಯಿಸಿದರು.
ರಾಜ್ಯದಲ್ಲಿ ವಾಸಿಸುವ ಒಬ್ಬನೇ ಒಬ್ಬ ತಮಿಳನಿಗೆ ತೊಂದರೆಯಾಗಿಲ್ಲ . ಅದರರ್ಥ ರಾಜ್ಯದ ಜನರು ಶಾಂತಿ ಪ್ರಿಯರು. ಇಡೀ ದೇಶ ನಮ್ಮ ರಾಜ್ಯದ ಜನತೆಯ ಶಾಂತಿಪ್ರಿಯತೆಯನ್ನು ಶ್ಲಾಘಿಸಬೇಕು ಎಂದು ಕೃಷ್ಣ ಶಾಂತಿಪ್ರಿಯ ಕನ್ನಡಿಗರನ್ನು ಹೊಗಳಿದರು.
(ಪಿಟಿಐ)
ಮುಖಪುಟ / ಕೃಷ್ಣಗಾರುಡಿ