ಕೋಮುವಾದ ವಿರೋಧಿಸಿ ಮಣಿಪಾಲದಲ್ಲಿ ಸ್ಪಿಕ್ಮೆಕೆ ಸದ್ಭಾವನಾ ಮಂಚ
ಮಣಿಪಾಲ : ಕೋಮುವಾದದ ವಿರುದ್ಧದ ಹೋರಾಟ ಮನೋಭಾವವನ್ನು ವಿದ್ಯಾರ್ಥಿಗಳಲ್ಲಿ ಮೂಡಿಸಲು ಸ್ಪಿಕ್ಮೆಕೆ ಸಂಸ್ಥೆಯು ಮಣಿಪಾಲದಲ್ಲಿ ಸದ್ಭಾವನಾ ಮಂಚವನ್ನು ಆರಂಭಿಸಿದೆ.
ಭಾರತೀಯ ಯುವಜನತೆಯಲ್ಲಿ ಭಾರತೀಯ ಕಲೆ ಮತ್ತು ಸಂಗೀತದ ಬಗ್ಗೆ ತಿಳುವಳಿಕೆ ಮೂಡಿಸುವ ಉದ್ದೇಶದಿಂದ ಕೆಲಸ ಮಾಡುತ್ತಿರುವ ಸ್ಪಿಕ್ಮೆಕೆ (society for promotion of indian classical music and culture amongst youths) ಕೋಮುವಾದದ ವಿರುದ್ಧದ ಹೋರಾಟಕ್ಕಾಗಿ ಈ ಹೊಸ ವೇದಿಕೆಯನ್ನು ಇತ್ತೀಚೆಗಷ್ಟೇ ಆರಂಭಿಸಿದೆ ಎಂದು ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಕಿರಣ್ ಸೇಥಿ ತಿಳಿಸಿದ್ದಾರೆ.
ಸ್ಪಿಕ್ಮೆಕೆ ಸಂಸ್ಥೆಯು ಎರಡು ದಿನಗಳ ಕಾಲ ದಕ್ಷಿಣ ಭಾರತ ಸಮ್ಮೇಳನವನ್ನು ಸದ್ಯದಲ್ಲಿಯೇ ಆಯೋಜಿಸಲಿದೆ. ಸಮ್ಮೇಳನ ತಯಾರಿಯ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಆಗಮಿಸಿದ್ದ ಕಿರಣ್ ಸೇಥಿ ಮಣಿಪಾಲದಲ್ಲಿ ಹೊಸದಾಗಿ ಆರಂಭವಾಗಿರುವ ಸದ್ಭಾವನಾ ಮಂಚದ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಯುವ ಜನತೆಯನ್ನು ಜಾತೀಯತೆ, ಕೋಮುವಾದ ಮತ್ತು ಭ್ರಷ್ಟಾಚಾರ ( ಮೂರು ‘ಸಿ’ಗಳು)ದಿಂದ ವಿಮುಖವಾಗಿಸುವುದು ಈ ಮಂಚದ ಮುಖ್ಯ ಉದ್ದೇಶ. ಬದಲಾಗಿ ನಮ್ಮ ದೇಶದ ಉನ್ನತ ಸಂಸ್ಕೃತಿಯ ಬಗ್ಗೆ ಯುವ ಜನರಲ್ಲಿ ಅರಿವು ಮಾಡಿಸುವ ಕೆಲಸವನ್ನು ಮತ್ತಷ್ಟು ಹೆಚ್ಚಿನ ಒತ್ತಿನೊಂದಿಗೆ ಸ್ಪಿಕ್ ಮೆಕೆ ಮತ್ತು ಸದ್ಭಾವನಾ ಮಂಚ ಮಾಡುತ್ತದೆ ಎಂದು ಸೇಥಿ ಹೇಳಿದರು.
ಸದ್ಭಾವನಾ ಮಂಚ ಗುಜರಾತ್ನಂತಹ ಕೋಮುವಾದ ಗ್ರಸ್ಥ ಪ್ರದೇಶಗಳಿಗೆ ವಿದ್ಯಾರ್ಥಿಗಳ ಪ್ರವಾಸ ಏರ್ಪಡಿಸಿ ನಮ್ಮ ದೇಶೀಯ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ಮುಂಬರುವ ದಿನಗಳಲ್ಲಿ ಹಮ್ಮಿಕೊಳ್ಳಲಿದೆ.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...