ಬೆಂಗಳೂರಲ್ಲಿ ಇನ್ನೊಬ್ಬ ಬಾಬಾ: ಭೂಸಮಾಧಿಯಾಗಿ ಎದ್ದು ಬಂದ!
ಬೆಂಗಳೂರು : ಹೊಸೂರು ರಸ್ತೆಯ ರೂಪೇನ ಅಗ್ರಹಾರದಲ್ಲಿರುವ ನಮ್ಮ ಕಚೇರಿಯ ಬಗಲಲ್ಲೇ ಶಿವಸಾಯಿಬಾಬಾ ಎಂಬಾತ ಒಂದು ದಿನದ ಮಟ್ಟಿಗೆ ಭೂ ಸಮಾಧಿಯಾಗಿ, ನಂತರ ಎದ್ದು ಬಂದಾಗ ಕೈಮುಗಿದು ನಿಂತಿದ್ದ ಭಕ್ತಾದಿಗಳು ಸಹಸ್ರಾರು !
ಆಯುಧ ಪೂಜೆಯ ದಿನ ಸಂಜೆ 5 ಗಂಟೆಗೆ 9.5 ಅಡಿ ಆಳ, ಅಷ್ಟೇ ಅಡಿ ಉದ್ದಗಲದ ಹಳ್ಳದೊಳಕ್ಕೆ ಒಂದು ಬಾಟಲು ನೀರಿನೊಡನೆ ಶಿವಸಾಯಿಬಾಬಾ ಇಳಿದರು. ಹಳ್ಳಕ್ಕೆ ತಗಡಿನ ಹೊದಿಕೆ ಮುಚ್ಚಿ, ಅದರ ಮೇಲೆ ಮಣ್ಣು ಮುಚ್ಚಿ, ಹೂವಿನಿಂದ ಜಾಗವನ್ನು ಅಲಂಕರಿಸಲಾಯಿತು. ಸ್ವಾಮೀಜಿ ಬರುವವರೆಗೂ ಆಶ್ಚರ್ಯದ ಕಂಗಳ ಅನೇಕ ಭಕ್ತಾದಿಗಳು ಜಾಗದಲ್ಲಿ ನೆಲೆಸಿದ್ದರು. ಸ್ವಾಮೀಜಿ ಶಿಷ್ಯರಿಂದ ಅವಿರತ ಭಜನೆ ನಡೆಯಿತು.
ಈ ಸ್ವಾಮೀಜಿ ಭೂ ಸಮಾಧಿಯಾಗುತ್ತಿರುವುದು ಇದು ಮೂರನೇ ಬಾರಿ. ಇದಕ್ಕೂ ಮುಂಚೆ ಮುಂಬಯಿ ಹಾಗೂ ಅನಂತಪುರದಲ್ಲಿ ಭೂ ಸಮಾಧಿಯಾಗಿದ್ದರು. ಅಂದಹಾಗೆ, ಬಾಬಾ ಈ ಕೆಲಸ ಮಾಡಿರುವುದು ವಿಶ್ವಶಾಂತಿಗಾಗಿ. ಈ ರೀತಿಯ ಭೂಸಮಾಧಿಯಿಂದ ವಿಶ್ವ ಶಾಂತಿ ಹೇಗೆ ನೆಲೆಸುತ್ತದೆ ಎಂದು ಬಾಬಾರನ್ನು ಕೆಣಕಿದರೆ, ಅದು ಅವರವರ ಭಾವಕ್ಕೆ ಬಿಟ್ಟ ವಿಚಾರ ಎಂದರು.
ಈ ಘಟನೆಯನ್ನು ಕಂಡ ವೈದ್ಯರೊಬ್ಬರು ಪ್ರತಿಕ್ರಿಯಿಸಿದ್ದು ಹೀಗೆ- ‘ಹಟಯೋಗದಿಂದ ಯಾರು ಬೇಕಾದರೂ ಒಂದು ದಿನ ಒಂದೇ ಲೋಟ ನೀರು ಕುಡಿದು ಬದುಕಬಹುದು. ಇದೇನು ಪವಾಡವಲ್ಲ. ಇಂಥವರು ಆಧ್ಯಾತ್ಮದ ಬಗೆಗಿನ ಗೌರವಕ್ಕೇ ಕಳಂಕ ತರುತ್ತಾರೆ. ಒಬ್ಬ ಆರ್ಬಿಟೋ ಬರುತ್ತಾನೆ. ಕತ್ತರಿಯಿಲ್ಲದೆ ಹೊಟ್ಟೆ ಕುಯ್ಯುತ್ತೇನೆ ಅಂತಾನೆ. ಜನ ಕ್ಯೂ ನಿಲ್ಲುತ್ತಾರೆ. ರಾಜಕಾರಣಿಗಳು ವಿಧಾನಸೌಧದ ಮೊಗಸಾಲೆಗೇ ಕರೆದುಕೊಂಡು ಹೋಗಿ, ತಲೆಬಾಗುತ್ತಾರೆ. ಆಮೇಲೆ ಅವನು ಓಡಿ ಹೋಗುತ್ತಾನೆ. ಇಷ್ಟಾದರೂ ನಮ್ಮ ಜನಕ್ಕೆ ಬುದ್ಧಿ ಬರುವುದಿಲ್ಲ. ಪುಟ್ಟಪರ್ತಿ ಸಾಯಿಬಾಬನ ಅಪರಾವತಾರದಂತೆ ಕಾಣುವ ಈ ಶಿವ ಸಾಯಿಬಾಬ ಈಗ ಬೂದಿ ಹಿಡಿದು ಬೆಂಗಳೂರಿಗೂ ಬಂದಿದ್ದಾನೆ. ಇವನ ಮುಂದೆಯೂ ರಾಜಕಾರಣಿಗಳು ನಿಂತಿರುವುದು ವಿಪರ್ಯಾಸ’.
ಇಂಥಾ ಸ್ವಾಮಿಗಳ ಬಗ್ಗೆ ನೀವೇನು ಹೇಳುತ್ತೀರಿ?
ಮುಖಪುಟ / ಇವತ್ತು... ಈ ಹೊತ್ತು...