ರಾಜ್ಯದಲ್ಲಿ ಎಡೆಬಿಡದೆ ಸುರಿದ ಮಳೆಗೆ ನಾಲ್ಕು ಜೀವಗಳ ಆಹುತಿ
ಬೆಂಗಳೂರು: ಸತತ ನಾಲ್ಕು ದಿನಗಳಿಂದ ರಾಜ್ಯದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಅಪಾರ ಬೆಳೆ ಹಾನಿ ಮಾತ್ರವಲ್ಲದೆ ಮನೆ ಕುಸಿತ ಮತ್ತು ಮಳೆ ನೀರಿನ ಪ್ರವಾಹಕ್ಕೆ ಸಿಕ್ಕಿ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ.
ರಾಯಚೂರು ನಗರದ ಚಂದ್ರಮೌಳೇಶ್ವರ ವೃತ್ತದ ಲಿಂಗಸಗೂರು ರಸ್ತೆಯಲ್ಲಿ ವಯೋವೃದ್ಧರೊಬ್ಬರು ಮೃತಪಟ್ಟಿದ್ದರೆ, ಲಿಂಗಸಗೂರು ತಾಲ್ಲೂಕಿನ ಹಟ್ಟಿ ಹಳ್ಳದಲ್ಲಿ ನೀರಿನ ರಭಸಕ್ಕೆ ಗ್ರಾಮದ ಪೀರ ಆಹ್ಮದ್ ಎಂಬ 15 ವರ್ಷದ ಬಾಲಕ ಕೊಚ್ಚಿಕೊಂಡು ಹೋಗಿದ್ದಾನೆ.
ಬಿಜಾಪುರ, ಬಾಗಲಕೋಟೆ ಜಿಲ್ಲೆಯಲ್ಲಿ ಮೂರು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮನೆ ಕುಸಿದು ಇಬ್ಬರು ಬಾಲಕರು ಮೃತಪಟ್ಟಿದ್ದಾರೆ. ಐದು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಹುನಗುಂದ ತಾಲ್ಲೂಕಿನ ಹನುಮಪ್ಪ ಕರಿಯಪ್ಪ ಚಲವಾದಿ (4) ಎಂಬ ಬಾಲಕ ಹಾಗೂ ಜಮಖಂಡಿಯ ಕೆ. ಡಿ. ಗ್ರಾಮದಲ್ಲಿ ಕೃಷ್ಣ ಯಮನಪ್ಪ ತಳೀಕರೆ(3) ಎಂಬ ಬಾಲಕ ಮೃತಪಟ್ಟಿರುವುದು ತಿಳಿದುಬಂದಿದೆ.
ನಾಲ್ಕು ದಿನಗಳ ನಿರಂತರ ಮಳೆಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 250 ಎಕರೆ ಪ್ರದೇಶದಲ್ಲಿ ಭತ್ತದ ಬೆಳೆ ನೀರು ಪಾಲಾಗಿದೆ. ರಾಯಚೂರು ಜಿಲ್ಲೆಯಲ್ಲಿ ಹತ್ತಿ ಹಾಗೂ ಸೂರ್ಯಕಾಂತಿ ಬೆಳೆಗಳೂ ಮಳೆನೀರಿನಲ್ಲಿ ಸಮಾಧಿಗೊಂಡಿದೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...