ಬೆಂಗಳೂರು-ಮೈಸೂರು ನಡುವೆ ರೈಲು ಸಂಚಾರ ಪುನರಾರಂಭ
ಬೆಂಗಳೂರು : ಕಾವೇರಿ ಚಳವಳಿ ತಣ್ಣಗಾದ ಹಿನ್ನೆಲೆಯಲ್ಲಿ ಸುಮಾರು ಹದಿನೈದು ದಿನಗಳಿಂದ ಅಸ್ತವ್ಯಸ್ತಗೊಂಡಿದ್ದ ಬೆಂಗಳೂರು ಹಾಗೂ ಮೈಸೂರು ನಡುವಿನ ರೈಲು ಸಂಚಾರ ಮತ್ತೆ ಆರಂಭಗೊಂಡಿದೆ.
ಬೆಂಗಳೂರು ಹಾಗೂ ಮೈಸೂರು ನಡುವೆ ಎಂದಿನಂತೆ ರೈಲು ಸಂಚಾರ ಪ್ರಾರಂಭವಾಗಿದೆ. ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ದಕ್ಷಿಣ ರೈಲ್ವೆ ಪ್ರಕಟಣೆ ತಿಳಿಸಿದೆ.
ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ನಡೆಯುತ್ತಿದ್ದ ಚಳವಳಿಯ ಬಿಸಿ ರೈಲು ಸಂಚಾರಕ್ಕೆ ಮುಟ್ಟಿತ್ತು. ಅನೇಕ ಕಡೆಗಳಲ್ಲಿ ಪ್ರತಿಭಟನಾಕಾರರು ರೈಲ್ವೆ ಹಳಿಗಳಿಗೆ ಹಾನಿ ಮಾಡಿದ್ದರು. ಫಿಶ್ ಪ್ಲೇಟ್ಗಳನ್ನು ಕಿತ್ತೆಸೆದಿದ್ದರು. ಪ್ರಸ್ತುತ ದುರಸ್ಥಿ ಕಾರ್ಯಗಳು ಪೂರ್ಣಗೊಂಡಿದ್ದು ಸಂಚಾರ ಎಂದಿನಂತಿದೆ ಎಂದು ಪ್ರಕಟಣೆ ತಿಳಿಸಿದೆ.
ಬೆಂಗಳೂರು-ಮೈಸೂರು ನಡುವಣ ಬಸ್ ಸಂಚಾರ ಕೂಡ ಯಾವುದೇ ಅಡೆತಡೆಯಿಲ್ಲದೆ ಸುಗಮವಾಗಿದೆ. ನವರಾತ್ರಿಯ ಅಂತಿಮಹಂತದ ಸಂಭ್ರಮ ಹಾಗೂ ಕಾವೇರಿ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಉತ್ತಮ ಮಳೆ ರೈತರಲ್ಲಿ ಸಂಭ್ರಮ ಹುಟ್ಟಿಸಿದೆ.
(ಇನ್ಫೋ ವಾರ್ತೆ)
ಮುಖಪುಟ / ಕಾವೇರಿ ಕನ್ನಡಿ