‘ಮಹದೇವ ಸ್ವಾಮಿ ಜೊತೆ ಇನ್ನೊಬ್ಬ ಸಂಧಾನಕಾರ ಬೇಕಾಗಿದ್ದಾರೆ’
ಬೆಂಗಳೂರು : ಮಳೆರಾಯನ ಕೃಪೆಯಿಂದ ಕಾವೇರಮ್ಮನಿಗೆ ನೀರು ಬಂದು ಚಳವಳಿ ಕಾವು ತಣ್ಣಗಾಗಿರುವ ಹೊತ್ತಲ್ಲಿ ವೀರಪ್ಪನ್ ಒತ್ತೆಯಾಳಾಗಿರುವ ನಾಗಪ್ಪ ಪ್ರಕರಣ ಈಗ ಬಿಸಿಯಾಗುತ್ತಿದೆ.
ಕಳೆದ ವಾರ ಪೂರ ಪಾದಯಾತ್ರೆಯಲ್ಲಿ ಬಿಜಿಯಾಗಿದ್ದ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಈಗ ನಾಗಪ್ಪನವರನ್ನು ಬಿಡಿಸಿ ತರುವ ಬಗ್ಗೆ ಜೋರಾಗಿ ಮಾತಾಡಲು ಶುರುವಿಟ್ಟಿದ್ದಾರೆ. ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಕೂಡ ಜನತಾ ದಳ ಮುಖಂಡ ಮಹದೇವ ಸ್ವಾಮಿ ಜೊತೆ ಬೇರೊಬ್ಬ ಸಂಧಾನಕಾರರನ್ನು ಕಳುಹಿಸಿಕೊಡುವ ಕಸರತ್ತಿನಲ್ಲಿ ತೊಡಗಿದ್ದಾರೆ
ವಿಜಯದಶಮಿ ದಿನ ಸುದ್ದಿಗಾರರ ಜೊತೆ ಮಾತಾಡಿದ ಖರ್ಗೆ- ಕೊಳತ್ತೂರು ಮಣಿ ಜೊತೆಯಲ್ಲಿ ಸಂಧಾನಕಾರರಾಗಿ ತೆರಳಲು ಮಹದೇವ ಸ್ವಾಮಿ ಸಿದ್ಧರಿದ್ದಾರೆ. ಆದರೆ, ಮಣಿಗೆ ಜಾಮೀನು ಸಿಗುವುದು ಸುಲಭವಲ್ಲ. ಅದಕ್ಕಾಗಿ ಕಾಯುತ್ತಾ ಕೂರಲು ಸಮಯವೂ ಇಲ್ಲ. ಹೀಗಾಗಿ ಬೇರೊಬ್ಬ ಸಂಧಾನಕಾರರ ಜೊತೆ ಮಹದೇವ ಸ್ವಾಮಿ ಅವರನ್ನು ಕಳಿಸಿಕೊಡುವ ಯೋಚನೆಯಿದೆ ಎಂದರು.
‘ಇದಕ್ಕೆ ಮಹದೇವ ಸ್ವಾಮಿ ಒಪ್ಪುವರೋ ಇಲ್ಲವೋ ಎಂಬ ಪ್ರಶ್ನೆ ಉಳಿದಿದೆ. ಇವತ್ತೋ ನಾಳೆಯೋ ಮಹದೇವ ಸ್ವಾಮಿ ಬೆಂಗಳೂರಿಗೆ ಬಂದು, ಮುಖ್ಯಮಂತ್ರಿ ಹಾಗೂ ನನ್ನ ಜೊತೆ ಮಾತಾಡಲಿದ್ದಾರೆ. ನಂತರ ಮುಂದೇನು ಎಂಬುದನ್ನು ತೀರ್ಮಾನಿಸಲಾಗುವುದು. ಸದ್ಯಕ್ಕೆ ಮಹದೇವ ಸ್ವಾಮಿ ಅವರ ಮೂಲಕ ವೀರಪ್ಪನ್ಗೆ ರೇಡಿಯೋ ಸಂದೇಶ ಕಳಿಸುವ ನಿರ್ಧಾರವಿದೆ. ಇದರಿಂದ ವೀರಪ್ಪನ್ಗೆ ನಾವು ಸುಮ್ಮನೆ ಕೂತಿಲ್ಲ ಎಂಬುದು ಮನದಟ್ಟಾಗಲಿದೆ’ ಎಂದು ಹೇಳಿದರು.
ರಾಮದಾಸ್ ನೆರವು : ಇನ್ನೊಂದೆಡೆ ರಕ್ಷಣಾ ಸಚಿವ ಜಾರ್ಜ್ ಪರ್ನಾಂಡಿಸ್ ಅವರ ಜೊತೆ ಮಾತಾಡಿರುವ ಮುಖ್ಯಮಂತ್ರಿ ಕೃಷ್ಣ, ತಮಿಳು ನಾಯಕ ರಾಮದಾಸ್ ನೆರವಿನಿಂದ ಇನ್ನಾರನ್ನಾದರೂ ಸಂಧಾನಕ್ಕೆ ಕಳುಹಿಸಲು ಸಾಧ್ಯವೇ ಎಂಬ ವಿಷಯ ಪ್ರಸ್ತಾಪಿಸಿದ್ದಾರೆ.
ಉಪವಾಸ ಕೂರುವೆ : ಸರ್ಕಾರದ ತಲೆ ಸವರುವಿಕೆಯಿಂದ ನಾಗಪ್ಪ ಕುಟುಂಬದವರು ಬೇಸತ್ತಿದ್ದು, ನಾಗಪ್ಪನವರನ್ನು ಬೇಗ ಬಿಡಿಸಿ ತರುವಂತೆ ಸೋಮವಾರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದಾರೆ. ತಮ್ಮ ಪತಿಯ ಬಿಡುಗಡೆಗಾಗಿ ಸರ್ಕಾರ ಕ್ಷಿಪ್ರವಾಗಿ ಕಾರ್ಯತಂತ್ರ ರೂಪಿಸದಿದ್ದಲ್ಲಿ, ನಿರಶನ ಕೂರುವುದಾಗಿ ನಾಗಪ್ಪನವರ ಪತ್ನಿ ಪರಿಮಳಾ ಎಚ್ಚರಿಕೆ ಕೊಟ್ಟಿದ್ದಾರೆ.
(ಪಿಟಿಐ)
ಮುಖಪುಟ / ವೀರಪ್ಪನ್ ಶಿಕಾರಿ