ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಂತಿ ಸಾರುವ ಸ್ವಯಂದೂತನ ಕಾರ್ಯ ನಿರ್ವಹಿಸಿದ್ದೇನೆ-ಕೃಷ್ಣ

By Staff
|
Google Oneindia Kannada News

ಮಂಡ್ಯ : ಶಾಂತಿ ಹಾಗೂ ಸೌಹಾರ್ದತೆಯನ್ನು ಸಾರುವ ಸ್ವಯಂದೂತನಂತೆ ಕಾರ್ಯ ನಿರ್ವಹಿಸಿದ್ದೇನೆ. ಪಾದಯಾತ್ರೆ ಯಶಸ್ವಿಯಾಗಿದೆ ಎಂದು ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ತಮ್ಮ ಪಾದಯಾತ್ರೆಯಯನ್ನು ಬಣ್ಣಿಸಿಕೊಂಡಿದ್ದಾರೆ.

ತಮಿಳುನಾಡಿನಲ್ಲಿ ವಾಯುವ್ಯ ಮುಂಗಾರು ಚುರುಕಾಗಿದ್ದು, ಅಲ್ಲಿನ ಜಲಾಶಯಗಳಿಗೆ ನೀರಿನ ಒಳ ಹರಿವು ಹೆಚ್ಚಾಗಿರುವುದನ್ನು ಸುಪ್ರಿಂಕೋರ್ಟ್‌ ಪರಿಗಣಿಸಬೇಕು ಎಂದು ಮುಖ್ಯಮಂತ್ರಿ ಕೃಷ್ಣ ನ್ಯಾಯಪೀಠವನ್ನು ಕೋರಿದರು. ನ್ಯಾಯಾಂಗ ನಿಂದನೆ ಆರೋಪದ ಹಿನ್ನೆಲೆಯಲ್ಲಿ ತಿಂಗಳೊಪ್ಪತ್ತಿನಲ್ಲಿ ಸುಪ್ರಿಂಕೋರ್ಟ್‌ನಿಂದ ಎರಡು ಬಾರಿ ನೋಟಿಸು ಪಡೆದಿರುವ ಮುಖ್ಯಮಂತ್ರಿ ಕೃಷ್ಣ ಶನಿವಾರ (ಅ.12) ಈ ಮನವಿ ಮಾಡಿದರು. ಪಾದಯಾತ್ರೆಯ ಸಮಾರೋಪದ ಸಂದರ್ಭದಲ್ಲಿ ಕೃಷ್ಣ ಸುದ್ದಿಗಾರರೊಂದಿಗೆ ಮಾತನಾಡಿದರು.

ಶಾಂತಿ, ಸೌಹಾರ್ದತೆಯನ್ನು ಸಾರುವುದು ತಮ್ಮ ಪಾದಯಾತ್ರೆಯ ವಿನಮ್ರ ಉದ್ದೇಶವಾಗಿದ್ದು, ಅದು ನೆರವೇರಿದೆ ಎಂದರು. ಪಾದಯಾತ್ರೆಯ ಬಗ್ಗೆ ಪ್ರತಿಪಕ್ಷಗಳ ಟೀಕೆಗಳ ಕುರಿತು ಉತ್ತರಿಸಿದ ಕೃಷ್ಣ - ಪಾದಯಾತ್ರೆಯಲ್ಲಿ ರಾಜಕೀಯಕ್ಕೆ ಕೊನೆಯ ಸ್ಥಾನ ಎನ್ನುವುದನ್ನು ಪಾದಯಾತ್ರೆಯುದ್ದಕ್ಕೂ ತಾವು ಹೇಳಿಕೊಂಡು ಬಂದಿರುವುದಾಗಿ ತಿಳಿಸಿದರು.

ಕರ್ನಾಟಕದ ಕೆಲವು ಪ್ರದೇಶಗಳಲ್ಲೂ ಸ್ವಲ್ಪ ಮಟ್ಟಿಗೆ ಮಳೆಯಾಗುತ್ತಿದೆ. ಇದೇ ರೀತಿ ಮಳೆ ಮುಂದುವರಿದರೆ ಕಾವೇರಿ ವಿವಾದ ಸೌಹಾರ್ದಯುತವಾಗಿ ಬಗೆಹರಿಯುವ ವಿಶ್ವಾಸ ತಮಗಿದೆ. ಒಟ್ಟಿನಲ್ಲಿ ಮಳೆಯ ಬಗ್ಗೆ ಅಪಾರ ನಿರೀಕ್ಷೆ ಇರಿಸಿಕೊಂಡಿದ್ದೇವೆ ಎಂದು ಕೃಷ್ಣ ತಿಳಿಸಿದರು.

ನ್ಯಾಯಾಲಯ ತಮಗೆ ಎರಡನೇ ಬಾರಿ ನೋಟಿಸು ಜಾರಿ ಮಾಡಿರುವ ಕುರಿತು ಪ್ರತಿಕ್ರಿಯಿಸಿದ ಕೃಷ್ಣ, ಸುಪ್ರಿಂಕೋರ್ಟ್‌ ಮೂಲಭೂತ ಹಕ್ಕುಗಳ ಕಾವಲುಗಾರ ಎಂದು ಬಣ್ಣಿಸಿದರು.

ರಾಜ್ಯದಲ್ಲಿ ಕರಾಳ ದಿನ ಆಚರಣೆ
ನೈವೇಲಿ ಅಣು ಸ್ಥಾವರದಿಂದ ಕರ್ನಾಟಕಕ್ಕೆ ಸರಬರಾಜಾಗುತ್ತಿರುವ ವಿದ್ಯುತ್‌ ಸರಬರಾಜು ನಿಲ್ಲಿಸುವಂತೆ ನೈವೇಲಿಯಲ್ಲಿ ತಮಿಳು ಚಿತ್ರೋದ್ಯಮಿಗಳು ಹಮ್ಮಿಕೊಂಡ ಪ್ರತಿಭಟನೆಯನ್ನು ವಿರೋಧಿಸಿ, ವಿವಿಧ ಕನ್ನಡಪರ ಸಂಘಟನೆಗಳು ಶನಿವಾರವನ್ನು ಕರಾಳ ದಿನವನ್ನಾಗಿ ಆಚರಿಸಿದವು.

ವಾಟಾಳ್‌ ನಾಗರಾಜ್‌ ಹಾಗೂ ಸಾ.ರಾ.ಗೋವಿಂದು ನೇತೃತ್ವದಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ನಡೆದ ಬೃಹತ್‌ ಪ್ರತಿಭಟನಾ ಮೆರವಣಿಗೆ ತಮಿಳು ಚಿತ್ರೋದ್ಯಮಿಗಳ ನಿಲುವನ್ನು ಖಂಡಿಸಿತು. ಕಮಲಾನಗರದಲ್ಲಿ ಸಾವಿರ ಸಂಖ್ಯೆಯಲ್ಲಿ ಕನ್ನಡ ಕಾರ್ಯಕರ್ತರು ಜಮಾಯಿಸಿದ್ದರಿಂದ ರಸ್ತೆ ಸಂಚಾರ ಕೆಲ ಕಾಲ ಅಸ್ತವ್ಯಸ್ತಗೊಂಡಿತು.

ಮೈಸೂರು ಹಾಗೂ ಬೆಳಗಾವಿಯಲ್ಲೂ ವಿವಿಧ ಕನ್ನಡ-ರೈತ ಪರ ಸಂಘಟನೆಗಳು ಕರಾಳ ದಿನ ಆಚರಿಸಿದವು.

ಸಾಹಿತಿಗಳ ಪ್ರತಿಭಟನೆ
ಕಾವೇರಿ ವಿಷಯದಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗುತ್ತಿರುವುದನ್ನು ಪ್ರತಿಭಟಿಸಿ ಕನ್ನಡ ಸಾಹಿತ್ಯ ಪರಿಷತ್‌ ಆಶ್ರಯದಲ್ಲಿ ಸಾಹಿತಿಗಳು ಹಾಗೂ ಕಲಾವಿದರು ಶನಿವಾರ ಪ್ರತಿಭಟನೆ ವ್ಯಕ್ತಪಡಿಸಿದರು. ಧರಣಿಯಲ್ಲಿ ಭಾಗವಹಿಸಿದ್ದ ಹಿರಿಯ ಸಾಹಿತಿ-ಕಲಾವಿದರು ಚಳವಳಿ ನಡೆಸುತ್ತಿರುವ ರಾಜ್ಯದ ರೈತರಿಗೆ ಬೆಂಬಲ ವ್ಯಕ್ತಪಡಿಸಿದರು. ಗಂಗಾ-ಕಾವೇರಿಗೆ ಸಂಪರ್ಕ ಕಲ್ಪಿಸುವುದೊಂದೇ ಕಾವೇರಿ ಸಮಸ್ಯೆಗೆ ಪರಿಹಾರ ಎಂದು ಹಿರಿಯ ಕವಿ ಜಿ.ಎಸ್‌.ಸಿದ್ಧಲಿಂಗಯ್ಯ ಹಾಗೂ ಚಿತ್ರನಟ ಶ್ರೀನಾಥ್‌ ಅಭಿಪ್ರಾಯಪಟ್ಟರು.

ಮಂಡ್ಯದಲ್ಲಿ ರೈತರ ಶಾಂತಿಯುತ ಮೆರವಣಿಗೆ
ಕರ್ನಾಟಕಕ್ಕೆ ವಿದ್ಯುತ್‌ ಸರಬರಾಜು ನಿಲ್ಲಿಸುವಂತೆ ತಮಿಳು ಚಿತ್ರೋದ್ಯಮಿಗಳ ಆಗ್ರಹವನ್ನು ವಿರೋಧಿಸಿ ಮಂಡ್ಯ ಜಿಲ್ಲಾ ರೈತರು ಶನಿವಾರ ಶಾಂತಿಯುತ ಮೆರವಣಿಗೆ ನಡೆಸಿದರು. ಮಂಡ್ಯದ ಸಿಲ್ವರ್‌ ಜ್ಯುಬಿಲಿ ಪಾರ್ಕ್‌ನಲ್ಲಿ ಕಪ್ಪು ಬಾವುಟ ಪ್ರದರ್ಶಿಸುವ ಮೂಲಕ ಪ್ರತಿಭಟನಾ ಕಾರ್ಯಕ್ರಮಕ್ಕೆ ಮಂಡ್ಯ ಜಿಲ್ಲಾ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ.ಮಾದೇಗೌಡ ಚಾಲನೆ ನೀಡಿದರು.

ಜಿಲ್ಲೆಯ ಶಾಸಕರಾದ ಆತ್ಮಾನಂದ, ಎಚ್‌.ಹೊನ್ನಪ್ಪ ಹಾಗೂ ಎಚ್‌.ಡಿ.ಚೌಡಯ್ಯ ಮತ್ತು ರೈತ ಸಂಘದ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ರೈತರು ಶಾಂತಿ ಕಾಪಾಡಬೇಕೆಂದು ಮಾದೇಗೌ ಮನವಿ ಮಾಡಿದರು.

ಮಂಡ್ಯದಲ್ಲಿ ಹಬ್ಬದ ವಾತಾವರಣ
ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಅವರ ಪಾದಯಾತ್ರೆಯ ಸಮಾರೋಪ ಸಮಾರಂಭದ ಹಿನ್ನೆಲೆಯಲ್ಲಿ ಇಡೀ ಮಂಡ್ಯ ನಗರ ತಳಿರು ತೋರಣಗಳಿಂದ ಸಿಂಗರಿಸಿಕೊಂಡಿದೆ. ಮುಖ್ಯಮಂತ್ರಿಗಳನ್ನು ಸ್ವಾಗತಿಸುವ ಬೃಹತ್‌ ಬ್ಯಾನರ್‌ಗಳು ನಗರದಲ್ಲಿ ವ್ಯಾಪಕವಾಗಿವೆ. ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಲಕ್ಷಾಂತರ ರೈತರು ಭಾಗವಹಿಸಿದ್ದಾರೆ. ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ 1 ಲಕ್ಷ ಸಭಿಕರಿಗೆ ಮಾತ್ರ ಆಸನ ವ್ಯವಸ್ಥೆ ಕಲ್ಪಿಸಲಾಗಿತ್ತು.

ರಕ್ತಪಾತ ಬೇಡ- ರಜನಿ
ಕಾವೇರಿ ವಿವಾದ ರಕ್ತಪಾತಕ್ಕೆ ಎಡೆ ಮಾಡಿಕೊಡಬಾರದು ಎಂದು ತಮಿಳು ಚಿತ್ರರಂಗದ ಸೂಪರ್‌ಸ್ಟಾರ್‌ ರಜನಿಕಾಂತ್‌ ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ. ಶುಕ್ರವಾರ ಕರ್ನಾಟಕದ ವಿರುದ್ಧ ಪ್ರತಿಭಟನೆ ನಡೆಸಿದ ತಮಿಳು ಚಿತ್ರೋದ್ಯಮದ ರ್ಯಾಲಿಯಿಂದ ದೂರವುಳಿದ ರಜನಿಕಾಂತ್‌, ಭಾನುವಾರ ಚೆನ್ನೈನಲ್ಲಿ ಉಪವಾಸ ನಡೆಸಲಿದ್ದಾರೆ.

ನೈವೇಲಿಯಲ್ಲಿ ತಮಿಳು ಚಿತ್ರೋದ್ಯದ ಹಮ್ಮಿಕೊಂಡ ಪ್ರತಿಭಟನಾ ಪ್ರದರ್ಶನದಲ್ಲಿ ಸಾವಿರಾರು ತಮಿಳು ಚಿತ್ರೋದ್ಯಮದ ಸದಸ್ಯರು ಭಾಗವಹಿಸಿದ್ದಾರೆ.

(ಏಜೆನ್ಸೀಸ್‌)

ಮುಖಪುಟ / ಕಾವೇರಿ ಕನ್ನಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X