ಹೆಗಡೆ-ಗೌಡ ಕಚ್ಚಾಟದಲ್ಲಿ ಬೊಮ್ಮಾಯಿಗೆ ಹೊಸಪಕ್ಷದ ನಾಯಕತ್ವ ?
ಬೆಂಗಳೂರು : ಸಂಯುಕ್ತ ಜನತಾದಳ ಹಾಗೂ ಜಾತ್ಯತೀತ ಜನತಾದಳಗಳ ವಿಲೀನವಾದಲ್ಲಿ ಹೊಸ ಪಕ್ಷದ ಮುಖಂಡರಾಗಿ ಜಾತ್ಯತೀತ ಜನತಾದಳದ ಎಸ್.ಆರ್.ಬೊಮ್ಮಾಯಿ ಹೊರಹೊಮ್ಮುವ ಸಾಧ್ಯತೆ ದಟ್ಟವಾಗಿದೆ.
ಶಾಸಕ ಎ.ಬಿ.ಪಾಟೀಲ್ ಅವರ ಮನೆಯಲ್ಲಿ ಸಭೆ ಸೇರಿದ್ದ ಸಂಯುಕ್ತ ಜನತಾದಳದ ಲಿಂಗಾಯಿತ ಶಾಸಕರು ಹೊಸ ಪಕ್ಷದ ಕಡಿವಾಣವನ್ನು ಬೊಮ್ಮಾಯಿ ಅವರಿಗೆ ಒಪ್ಪಿಸುವ ಕುರಿತು ಒಲವು ವ್ಯಕ್ತಪಡಿಸಿದ್ದಾರೆ. ರಾಮಕೃಷ್ಣ ಹೆಗಡೆ ಹಾಗೂ ದೇವೇಗೌಡರ ನಡುವೆ ಭಿನ್ನಾಭಿಪ್ರಾಯ ಇರುವುದರಿಂದ ಬೊಮ್ಮಾಯಿ ಅವರ ನಾಯಕತ್ವ ಹೊಸಪಕ್ಷಕ್ಕೆ ಅಗತ್ಯವೆಂದು ಲಿಂಗಾಯಿತ ಶಾಸಕರು ಅಭಿಪ್ರಾಯ ಪಟ್ಟಿದ್ದಾರೆ.
ಹಿರಿಯ ಮುಖಂಡರಾದ ಉಮೇಶ್ ಕತ್ತಿ , ಎಂ.ಪಿ.ಪ್ರಕಾಶ್, ಪಿಜಿಆರ್ ಸಿಂಧ್ಯಾ, ಕೆ.ಎನ್.ನಾಗೇಗೌಡ, ಎಂ.ಪಿ.ನಾಡಗೌಡ, ಮಹದೇವಪ್ರಸಾದ್, ಕೆ.ಬಿ.ಕೃಷ್ಣಮೂರ್ತಿ ಮುಂತಾದವರು ಕೂಡ ಬೊಮ್ಮಾಯಿ ನಾಯಕತ್ವಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಅವರು ಕಾವೇರಿ ಕೊಳ್ಳದಲ್ಲಿ ಪಾದಯಾತ್ರೆ ನೆಪದಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸುತ್ತಿರುವ ಹಿನ್ನೆಲೆಯಲ್ಲಿ ಉಭಯ ದಳಗಳ ನಡುವಣ ವಿಲೀನಕ್ಕೆ ಚಾಲನೆ ಬಂದಿದ್ದು , ಅ.20 ರೊಳಗೆ ಬೊಮ್ಮಾಯಿ ಅವರು ಸಂಧಾನ ಸೂತ್ರ ಪ್ರಕಟಿಸುತ್ತಾರೆನ್ನುವ ವದಂತಿ ಉಭಯ ದಳಗಳ ವಲಯದಲ್ಲಿ ದಟ್ಟವಾಗಿದೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...