ವಿಜಯಕಾಂತ್ ತೇಪೆ ಯತ್ನ : ರಜನಿ ನಿರಶನ ಒಂದು ದಿನ ಮುಂದಕ್ಕೆ
ಚೆನ್ನೈ : ನೈವೇಲಿ ರ್ಯಾಲಿಗೆ ಪರ್ಯಾಯವಾಗಿ ಶನಿವಾರ (ಅ.12) ನಿರಶನ ನಡೆಸಲು ನಿರ್ಧರಿಸಿದ್ದ ರಜನೀಕಾಂತ್, ಉಪವಾಸವನ್ನು ಒಂದು ದಿನ ಮುಂದೂಡಿದ್ದಾರೆ. ಶುಕ್ರವಾರ ಖುದ್ದು ರಜನಿ ಈ ವಿಷಯವನ್ನು ತಿಳಿಸಿದರು.
ಗುರುವಾರ ರಾತ್ರಿ ರಜನೀ ಜೊತೆ ದಕ್ಷಿಣ ಭಾರತ ಚಲನಚಿತ್ರ ಕಲಾವಿದರ ಸಂಘದ ವಿಜಯಕಾಂತ್ ನಡೆಸಿದ ಮಾತುಕತೆಯ ಫಲವಿದು. ತಮಿಳು ಸಿನಿಮಾ ಇಬ್ಭಾಗವಾಗುತ್ತಿದೆ ಎಂಬ ಸೊಲ್ಲು ದಟ್ಟವಾಗಿರುವುದರಿಂದ ಇದಕ್ಕೆ ತೇಪೆ ಹಚ್ಚುವ ವಿಜಯಕಾಂತ್ ಯತ್ನ ಯಶಸ್ವಿಯಾದಂತಾಗಿದೆ.
ನಿರಶನವನ್ನು ಭಾನುವಾರಕ್ಕೆ ಮುಂದೂಡಿದರೆ, ನೈವೇಲಿ ರ್ಯಾಲಿ ನಡೆಸುವ ಎಲ್ಲ ಚಿತ್ರ ನಟ- ನಟಿಯರು ತಮ್ಮ ನಿರಶನದಲ್ಲೂ ಭಾಗವಹಿಸಲು ಸಾಧ್ಯವಾಗುತ್ತದೆ ಎಂಬುದು ರಜನಿಯಲ್ಲಿ ವಿಜಯಕಾಂತ್ ಮಾಡಿಕೊಂಡ ಮನವಿ. ಈ ಮನವಿಗೆ ರಜನಿ ಹಸಿರು ನಿಶಾನೆ ತೋರಿದ್ದಾರೆ. ಆದರೆ ಈ ಆಮಿಷಕ್ಕೆ ಒಲಿದು, ನೈವೇಲಿ ರ್ಯಾಲಿಯಲ್ಲಿ ಭಾಗವಹಿಸದಿರುವ ತಮ್ಮ ನಿರ್ಧಾರವನ್ನು ಬದಲಿಸಲು ರಜನಿ ಸಿದ್ಧವಿಲ್ಲ.ಭಾನುವಾರ(ಅ.13) 9 ಗಂಟೆಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿ, ನಂತರ ರಾಜಭವನಕ್ಕೆ ಹೋಗಿ ರಾಜ್ಯಪಾಲರಿಗೆ ಮನವಿ ಪತ್ರ ಕೊಡಲಿದ್ದಾರೆ.
ಅಂದಹಾಗೆ, ರಜನಿ ಮುಷ್ಕರಕ್ಕೆ ತಮಿಳುನಾಡಿನ ಕಾಂಗ್ರೆಸ್, ಬಿಜೆಪಿ ಹಾಗೂ ದಲಿತ ಪ್ಯಾಂಥರ್ ಪಕ್ಷಗಳು ಬೆಂಬಲ ಸೂಚಿಸಿವೆ. ಇದೀಗ ಚಿತ್ರೋದ್ಯಮ ಕೂಡ ರಜನಿಗೆ ಬೆಂಬಲ ಕೊಡಲು ನಿರ್ಧರಿಸಿರುವುದು, ನೈವೇಲಿ ರ್ಯಾಲಿಗಿಂತ ರಜನಿ ನಿರಶನ ಕಾರ್ಯಕ್ರಮವೇ ಜೋರಾಗಲಿದೆ !
(ಪಿಟಿಐ)
ಮುಖಪುಟ / ಕಾವೇರಿ ಕನ್ನಡಿ