ಎಸ್ಸೆಂ.ಕೃಷ್ಣ ಸರ್ಕಾರದ ವರ್ಚಸ್ಸು ಹೆಚ್ಚಿಸಿದ ಕಾವೇರಿ-ಧರಂ ಸಿಂಗ್
ಬೆಂಗಳೂರು : ಕಾವೇರಿ ವಿಷಯದಲ್ಲಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ತಳೆದ ರೈತ ಪರ ನಿಲುವು ಕಾಂಗ್ರೆಸ್ನ ವರ್ಚಸ್ಸನ್ನು ಹೆಚ್ಚಿಸಿದೆ ಎಂದು ಕಾಮಗಾರಿ ಸಚಿವ ಎನ್.ಧರಂ ಸಿಂಗ್ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಕೃಷ್ಣ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷ ಪೂರೈಸಿದ ಸಂದರ್ಭದಲ್ಲಿ ಶುಕ್ರವಾರ ಮಾಧ್ಯಮದ ಮಂದಿಯ ಜೊತೆ ಧರಂ ಸಿಂಗ್ ಅಭಿಪ್ರಾಯ ಹಂಚಿಕೊಂಡರು. ವಿರೋಧ ಪಕ್ಷದವರು ಕ್ಷುಲ್ಲಕ ಅಪ ಪ್ರಚಾರ ಮಾಡಿದರೂ ಕೃಷ್ಣ ನಡೆಸಿದ ಪಾದಯಾತ್ರೆಗೆ ಜನರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಎಲ್ಲೂ ಗಲಭೆ ವಗೈರೆ ಸಂಭವಿಸಿಲ್ಲ. ಕಾವೇರಿ ಜಲಾನಯನದ ಪ್ರದೇಶದ ಜಿಲ್ಲೆಗಳ ಜನರ ಪ್ರೋತ್ಸಾಹ ಸರ್ಕಾರ ಎಷ್ಟು ಜನಮುಖಿ ಮತ್ತು ಜನಪ್ರಿಯ ಎಂಬುದನ್ನು ಸಾಬೀತುಪಡಿಸಿದೆ ಎಂದರು.
ತಮಿಳುನಾಡಿಗೆ ನೀರು ಬಿಡದಿರುವ ನಿರ್ಧಾರ ದಾರ್ಷ್ಟ್ಯವಾದದ್ದು. ಸುಪ್ರಿಂಕೋರ್ಟಿನ ಆದೇಶವನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಿಲ್ಲ. ನೀರೇ ಇಲ್ಲದಿದ್ದರೆ ಬಿಡುವ ಪ್ರಶ್ನೆ ಎಲ್ಲಿಂದ ಬರಬೇಕು ಎಂದು ಧರಂ ಸಿಂಗ್ ಸಮರ್ಥಿಸಿಕೊಂಡರು.
ಯಾವುದೇ ಸರ್ಕಾರ ಮಾಡಿರದಂಥ ಅಭಿವೃದ್ಧಿ ಕಾಮಗಾರಿಗಳನ್ನು ತಮ್ಮ ಸರ್ಕಾರ ಮಾಡಿದೆ ಎಂದು ಹೇಳಿಕೊಂಡ ಸಚಿವರು, 28 ಸಾವಿರ ಕಿ.ಮೀ. ಉದ್ದದ ಜಿಲ್ಲಾ ರಸ್ತೆಗಳನ್ನು 600 ಕೋಟಿ ರುಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...