ದೇವೇಗೌಡ್ರು- ಕೃಷ್ಣ ನೀರಿನಾಟಕ್ಕೆ ಅವಕಾಶ ಕೊಟ್ಟರೆ ಕೆಟ್ಟೀರಿ: ನಾಣಯ್ಯ
ಮಡಿಕೇರಿ : ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಮತ್ತು ಮಾಜಿ ಪ್ರಧಾನಿ ದೇವೇಗೌಡರು ಪಾದಯಾತ್ರೆ ನೆಪದಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಜನತಾ ದಳದ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಎಂ.ಸಿ.ನಾಣಯ್ಯ ತರಾಟೆಗೆ ತೆಗೆದುಕೊಂಡಿದ್ದಾರೆ.
ಕಾವೇರಿ ನೀರಿನಾಟವನ್ನೇ ರಾಜಕೀಯ ದಾಳ ಮಾಡಿಕೊಳ್ಳುತ್ತಿರುವ ರಾಜಕೀಯ ನಾಯಕರನ್ನು ಹೀಗೇ ಬಿಟ್ಟರೆ, ಕೊಡಗಿಗೆ ಒಂದು ಹನಿ ಕಾವೇರಿ ನೀರೂ ಉಳಿಯುವುದಿಲ್ಲ. ಜನರೆಲ್ಲ ಇಂಥಾ ರಾಜಕೀಯ ಮಾಡುವವರಿಗೆ ಪಾಠ ಕಲಿಸಬೇಕಿದೆ ಎಂದು ಕೊಡಗಿನ ಜನತೆಗೆ ಬುಧವಾರ ನಾಣಯ್ಯ ಕರೆ ಕೊಟ್ಟರು.
ಹೀಗೆ ನೀರಿನ ನೆಪದಲ್ಲಿ ಕಾದಾಡುತ್ತಿರುವ ರಾಜಕಾರಣಿಗಳು ಕಾವೇರಿಯ ಜನ್ಮ ಜಿಲ್ಲೆ ಕೊಡಗಿನ ಅಭಿವೃದ್ಧಿಯ ಬಗ್ಗೆ ಕಿಂಚಿತ್ತೂ ಯೋಚಿಸುತ್ತಿಲ್ಲ. ಇಲ್ಲಿನ ಜನತೆ ಕಾವೇರಿ ನೀರನ್ನು ಸಂಪೂರ್ಣವಾಗಿ ಉಳಿಸಿ, ಬಳಸಿಕೊಳ್ಳುವ ನಿಟ್ಟಿನಲ್ಲಿ ಒಂದು ರಾಜಕೀಯವಲ್ಲದ ಸಂಸ್ಥೆ ಕಟ್ಟಬೇಕಿದೆ. ಅದನ್ನು ಕಟ್ಟುತ್ತೇನೆ. ಈ ಸಂಸ್ಥೆಯಲ್ಲಿ ಎಲ್ಲಾ ಜಾತಿಯ ಜನರೂ ಇರುತ್ತಾರೆ. ಆದರೆ, ರಾಜಕೀಯ ಇರುವುದಿಲ್ಲ ಎಂದರು.
ನನಗೆ ರಾಜಕೀಯಕ್ಕಿಂತ ಕಾವೇರಿ ರಕ್ಷಣೆಯೇ ಮುಖ್ಯ. ತೀರಾ ಅಗತ್ಯ ಬಿದ್ದರೆ ರಾಜಕೀಯದಿಂದ ಹೊರಬಂದು, ಜನರ ಹಿತಾಸಕ್ತಿ ಕಾಪಾಡಲೂ ಸಿದ್ಧ ಎಂದು ನಾಣಯ್ಯ ಕಿಡಿ ಕಾರಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಕಾವೇರಿ ಕನ್ನಡಿ