ಕಾವೇರಿಗಾಗಿ ಕೃಷ್ಣ ಯಾತ್ರೆ ಕೈಬಿಡಲುಮಾದೇಗೌಡ, ಸೇಡಂ ಆಗ್ರಹ
ಬೆಂಗಳೂರು: ಕಾವೇರಿ ಚಳವಳಿ ನಿರತ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ರ ‘ಕಾವೇರಿಗಾಗಿ ಕೃಷ್ಣ ಯಾತ್ರೆ’ಗೆ ಕಾವೇರಿ ರೈತ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಜಿ. ಮಾದೇಗೌಡ ಹಾಗೂ ರಾಜ್ಯ ಬಿಜೆಪಿ ನಾಯಕ ಬಸವರಾಜ ಪಾಟೀಲ್ ಸೇಡಂ ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ.
ಮೈಸೂರು ಹಾಗೂ ಮಂಡ್ಯದಲ್ಲಿ ರೈತ ಚಳವಳಿ ಶಾಂತಿಯುತವಾಗಿಯೇ ನಡೆಯುತ್ತಿದೆ. ಕಾವೇರಿ ವಿವಾದಕ್ಕೆ ಸಂಬಂಧಿಸಿ ರಾಜ್ಯ ಸರಕಾರ ತೆಗೆದುಕೊಂಡಿರುವ ನಿರ್ಣಯವನ್ನು ರೈತ ಮುಖಂಡರು ಬೆಂಬಲಿಸಿದ್ದಾರೆ. ಆದಾಗ್ಯೂ ಮುಖ್ಯಮಂತ್ರಿಗಳು ಪಾದ ಯಾತ್ರೆ ಕೈಗೊಳ್ಳುತ್ತಿರುವುದು ಅರ್ಥಹಿನವಾದುದು ಎಂದು ಮಾದೇಗೌಡರು ಭಾನುವಾರ ಕೃಷ್ಣ ಪಾದಯಾತ್ರೆಯ ಬಗ್ಗೆ ಪ್ರತಿಕ್ರಿಯಿಸಿದರು.
ರಾಜ್ಯ ಸರಕಾರದ ಕಾವೇರಿ ನೀರು ಬಿಡದಿರುವ ನಿರ್ಧಾರಕ್ಕೆ ಎಲ್ಲ ಪಕ್ಷಗಳ, ರೈತ ಮುಖಂಡರ ಬೆಂಬಲವಿದೆ. ಆದರೂ ಮುಖ್ಯಮಂತ್ರಿ ಕೃಷ್ಣ ಪಾದಯಾತ್ರೆ ಕೈಗೊಳ್ಳುವ ಮೂಲಕ ಕಾಂಗ್ರೆಸ್ ಪಕ್ಷ ಕಾವೇರಿ ವಿವಾದದಿಂದ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಿದೆ ಎಂದು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಸವರಾಜ ಪಾಟೀಲ್ ಸೇಡಂ ಟೀಕಿಸಿದರು.
ಈ ನಡುವೆ, ಕಾವೇರಿ ಪಾದಯಾತ್ರೆಯಲ್ಲಿ ಚಿತ್ರರಂಗದ ಪ್ರಮುಖರು, ಇತರ ರಾಜಕೀಯ ಪಕ್ಷದ ನಾಯಕರು, ಸಾಹಿತಿಗಳು ಹಾಗೂ ಸಾಂಸ್ಕೃತಿಕ ನಾಯಕರೂ ಭಾಗವಹಿಸಬೇಕು ಎಂದು ಮುಖ್ಯಮಂತ್ರಿ ಎಸ್ಸೆಂ ಕೃಷ್ಣ ಮನವಿ ಮಾಡಿಕೊಂಡಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಕಾವೇರಿ ಕನ್ನಡಿ