‘ಹಿಂದೂ ರಾಷ್ಟ್ರ ನಿರ್ಮಾಣದಿಂದ ಮಾತ್ರಭಯೋತ್ಪಾದನೆ ನಿಗ್ರಹ ಸಾಧ್ಯ’
ಮಂಗಳೂರು: ಹಿಂದೂ ರಾಷ್ಟ್ರವು ದೇಶವನ್ನು ಭಯೋತ್ಪಾದನೆಯಿಂದ ಪಾರು ಮಾಡಿ ಅಲ್ಪ ಸಂಖ್ಯಾತರ ಹಿತಾಸಕ್ತಿಯನ್ನು ಕಾಪಾಡಬಲ್ಲುದು ಎಂದು ವಿಶ್ವ ಹಿಂದೂ ಪರಿಷತ್ನ ಅಂತರರಾಷ್ಟ್ರೀಯ ಅಧ್ಯಕ್ಷ ಅಶೋಕ್ ಸಿಂಘಾಲ್ ಅಭಿಪ್ರಾಪಟ್ಟಿದ್ದಾರೆ.
ಅವರು ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಗುಜರಾತ್, ಜಮ್ಮು-ಕಾಶ್ಮೀರ ಹಾಗೂ ಇತರ ರಾಜ್ಯಗಳಲ್ಲಿ ಹಿಂದೂ ಉದಯವನ್ನು ಕಾಂಗ್ರೆಸ್ ಕೂಡ ಒಪ್ಪಿಕೊಳ್ಳಬೇಕಾಗುತ್ತದೆ. ಯಾಕೆಂದರೆ ರಾಜಕೀಯ ಪಕ್ಷಗಳು ಬಹುಸಂಖ್ಯಾತರಾದ ಹಿಂದೂಗಳನ್ನೇ ಅವಲಂಬಿಸಬೇಕಾಗುತ್ತದೆ ಎಂದು ಸಿಂಘಾಲ್ ಹೇಳಿದರು.
ಜಮ್ಮು- ಕಾಶ್ಮೀರ ರಾಜ್ಯವನ್ನು ಮೂರು ಭಾಗಗಳನ್ನಾಗಿ ಮಾಡುವುದರಿಂದ ಭಯೋತ್ಪಾದಕ ಚಟುವಟಿಕೆಗಳನ್ನು ನಿಯಂತ್ರಿಸುವುದು ಸುಲಭವಾಗುತ್ತದೆ ಎಂಬ ಮಾತನ್ನು ಪುನರುಚ್ಚರಿಸಿದ ಸಿಂಘಾಲ್, ವಾಜಪೇಯಿ ಸರಕಾರ ಭಯೋತ್ಪಾದನೆಯ ನಿರ್ಮೂಲನಕ್ಕೆ ಶೀಘ್ರ ಹಾಗೂ ಪರಿಣಾಮಕಾರೀ ಕ್ರಮಗಳನ್ನು ಕೈಗೊಳ್ಳಬೇಕು. ಸಂಸತ್ತಿನ ಮೇಲೆ ಭಯೋತ್ಪಾದಕರ ದಾಳಿ ನಡೆದ ನಂತರವೂ ಸರಕಾರ ಪರಿಣಾಮಕಾರೀ ಕ್ರಮ ಕಕೈಗೊಂಡಿಲ್ಲ ಎಂದು ದೂರಿದರು.
ರಾಮಮಂದಿರ ಚಳವಳಿಯ ವಿಷಯ ಪ್ರಸ್ತಾಪಿಸಿದ ಸಿಂಘಾಲ್ ಅಯೋಧ್ಯೆಯಿಂದ ರಾಮಮೂರ್ತಿಯನ್ನು ಬೇರೆಡೆಗೆ ಒಯ್ಯಲು ಬಿಡದೇ ಇರುವ ಸಂತರ ನಿಲುವನ್ನು ವಿಹೆಚ್ಪಿ ಸಮರ್ಥಿಸುತ್ತಿದೆ. ರಾಮಮಂದಿರ ವಿವಾದ ಇತ್ಯರ್ಥವಾದ ತಕ್ಷಣವೇ ವಾರಣಾಸಿ ಮತ್ತು ಮಥುರಾ ದೇವಸ್ಥಾನದ ಮುಕ್ತಿಗಾಗಿ ಚಳವಳಿಯನ್ನು ಆರಂಭಿಸಲಾಗುವುದು ಎಂದರು.
ಕಾವೇರಿ ವಿಷಯದ ಬಗ್ಗೆ ಏನು ಹೇಳುತ್ತೀರೀ ಎಂಬ ಪ್ರಶ್ನೆಗೆ ಅದು ಈಗ ರಾಜಕೀಯ ವಿಷಯವಾಗಿಬಿಟ್ಟಿದೆ ಎಂದು ಗಂಗಾ ಕಾವೇರಿ ಜೋಡಣೆಯ ಯೋಜನೆಯನ್ನು ಸಮರ್ಥಿಸಿದರು.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...