ಸಾಹಿತ್ಯ ಪರಿಷತ್ ವತಿಯಿಂದ ನವೆಂಬರ್ನಲ್ಲಿ ಪುಸ್ತಕ ಮಾರಾಟ ಯಾತ್ರೆ
ಚಿಕ್ಕಮಗಳೂರು : ಈ ಬಾರಿ ಪುಸ್ತಕ ಪ್ರೇಮಿಗಳಿಗೆ ಹಬ್ಬ. ಇದು ರಾಷ್ಟ್ರೀಯ ಪುಸ್ತಕ ವರ್ಷ. ಆದ್ದರಿಂದ ಬರುವ ನವೆಂಬರ್ ಒಂದರಿಂದ ರಾಜ್ಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಶೇ 50ರ ರಿಯಾಯಿತಿ ದರದಲ್ಲಿ ಪುಸ್ತಕಗಳನ್ನು ಮಾರಾಟ ಮಾಡುವ ಯಾತ್ರೆಯನ್ನು ಹಮ್ಮಿಕೊಂಡಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷ ಹರಿಕೃಷ್ಣ ಪುನರೂರು ಘೋಷಿಸಿದ್ದಾರೆ.
ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ರಾಜ್ಯದ ಮೂಲೆ ಮೂಲೆಗೆ ಪರಿಷತ್ನ ಪ್ರಕಟಣೆಗಳನ್ನು ತಲುಪಿಸುವುದು ಇದರ ಉದ್ದೇಶವಾಗಿದೆ. ಪುಸ್ತಕ ಪ್ರದರ್ಶನ ಮಾರಾಟದ ವ್ಯವಸ್ಥೆಯನ್ನು ತಾಲ್ಲೂಕು ಹೋಬಳಿ ಕೇಂದ್ರಗಳಲ್ಲಿ ಮಾಡುವುದಾಗಿ ಹೇಳಿದರು.
ಅಕಾಡೆಮಿಗಳಿಗೆ ಸಿಗುತ್ತಿರುವಷ್ಟು ಅನುದಾನ ಸಾಹಿತ್ಯ ಪರಿಷತ್ಗೆ ಸಿಗುತ್ತಿಲ್ಲ ಎಂದು ವಿಷಾದಿಸಿದ ಅವರು ಕೇವಲ ಅನುದಾನ ಮಾತ್ರ ನೀಡಿದರೆ ಸಾಲದು, ಆ ಅನುದಾನದ ಬಳಕೆಯ ಬಗ್ಗೆಯೂ ಪರಿಶೀಲನೆ ನಡೆಸಬೇಕು ಎಂದು ಅಭಿಪ್ರಾಯಪಟ್ಟರು. ಕನ್ನಡ ರಾಜ್ಯೋತ್ಸವದ ಅಂಗವಾಗಿ ರಾಜ್ಯದ ವಿವಿಧ ಭಾಗದ ಸಾಹಿತಿಗಳನ್ನು ಒಂದುಗೂಡಿಸಿ ರಾಜ್ಯ ಮಟ್ಟದ ಕಾರ್ಯಕ್ರಮವನ್ನು ನಡೆಸುವ ಉದ್ದೇಶ ಪರಿಷತ್ಗೆ ಇದೆ ಎಂದೂ ಈ ಸಂದರ್ಭದಲ್ಲಿ ಪುನರೂರು ತಿಳಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...