ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈಲಿಗೆ ಬೆಂಕಿ : ಬೆಂಗಳೂರು- ಮೈಸೂರು ನಡುವೆ ಸಂಚಾರ ಸ್ಥಗಿತ

By Staff
|
Google Oneindia Kannada News

ಬೆಂಗಳೂರು : ಶುಕ್ರವಾರ ಸುಪ್ರಿಂಕೋರ್ಟ್‌ ಆದೇಶ ಹೊರಬೀಳುತ್ತಿದ್ದಂತೆ ಮಂಡ್ಯ- ಮೈಸೂರು- ಮದ್ದೂರಿನಲ್ಲಿ ಪ್ರತಿಭಟನೆ ಭುಗಿಲೆದ್ದಿದ್ದು, ಮದ್ದೂರಲ್ಲಿ ರೈಲಿನ ಎಂಜಿನ್‌ಗೆ ಬೆಂಕಿ ಹಚ್ಚಲಾಯಿತು. ಈ ಹಿನ್ನೆಲೆಯಲ್ಲಿ ಬೆಂಗಳೂರು- ಮೈಸೂರು ನಡುವೆ ಎಲ್ಲಾ ಬಸ್ಸು ಹಾಗೂ ರೈಲು ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಕಾವೇರಿ ನದಿ ಪ್ರಾಧಿಕಾರದ ಆದೇಶದಂತೆ ಕರ್ನಾಟಕ ಕಾವೇರಿ ನೀರನ್ನು ನಿತ್ಯ ತಮಿಳುನಾಡಿಗೆ ಬಿಡಬೇಕು ಎಂಬ ಸುಪ್ರಿಂಕೋರ್ಟ್‌ ಆದೇಶ ಹೊರಬಿದ್ದ ಬೆನ್ನಲ್ಲೇ ಮೈಸೂರು ಪ್ರಾಂತದಲ್ಲಿ ಚಳವಳಿ ತೀವ್ರವಾಯಿತು. ಮೈಸೂರಿನಿಂದ ದೆಹಲಿಗೆ ಹೋಗುತ್ತಿದ್ದ ಸ್ವರ್ಣ ಜಯಂತಿ ಎಕ್ಸ್‌ಪ್ರೆಸ್‌ ರೈಲನ್ನು ಮದ್ದೂರು ಬಳಿ ಪ್ರತಿಭಟನಾಕಾರರು ತಡೆದು, ಎಂಜಿನಿಗೆ ಬೆಂಕಿ ಹಚ್ಚಿದರು. ಎಂಜಿನ್‌ ಹಾಗೂ ಕೆಲವು ಐಷಾರಾಮಿ ಭೋಗಿಗಳು ಬೆಂಕಿ ಇಟ್ಟಿದ್ದರಿಂದ ಜಖಂ ಆಗಿವೆ. ಚಾಲಕನಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು ಆತನನ್ನು ಆಸ್ಪತ್ರೆಗೆ ಸೇರಿಸಲಾಯಿತು. ಬೆಂಕಿ ಭುಗಿಲೆದ್ದ ಕಾರಣ ಸುಮಾರು 25 ಮೀಟರ್‌ ಉದ್ದದಷ್ಟು ಹಳಿ ಕೂಡ ಹಾಳಾಗಿದೆ.

ರಸ್ತೆ ತಡೆ, ಕಲ್ಲುತೂರಾಟ, ಟೈರು ಸುಡುವಿಕೆ, ರೈಲು ತಡೆ- ಮೊದಲಾದ ಸ್ವರೂಪದ ಚಳವಳಿ ಇನ್ನಷ್ಟು ತೀವ್ರವಾಗುವ ನಿರೀಕ್ಷೆಯಿದ್ದು, ಬೆಂಗಳೂರು- ಮೈಸೂರು ನಡುವೆ ಎಲ್ಲಾ ಬಸ್‌ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಮುಂಗಡ ಸೀಟು ಕಾಯ್ದಿರಿಸುವಿಕೆಯನ್ನೂ ತಾತ್ಕಾಲಿಕವಾಗಿ ರದ್ದು ಪಡಿಸಲಾಗಿದೆ.

ಮಾದೇಗೌಡರು ಫೋನಲ್ಲಿ ಸಿಎಂಗೆ ಹೇಳಿದ್ದು...
ಸುಪ್ರಿಂಕೋರ್ಟ್‌ ಆದೇಶ ಹೊರಬಿದ್ದ ನಂತರ ಮಾಜಿ ಸಂಸದ ಮಾದೇಗೌಡರಿಗೆ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಫೋನಾಯಿಸಿದರು. ‘ಪ್ರತಿಭಟನೆಯನ್ನು ಹಿಂದಕ್ಕೆ ತೆಗೆದುಕೊಳ್ಳುವಂತೆ ರೈತರು ಹಾಗೂ ಚಳವಳಿಕಾರರ ಮನವೊಲಿಸಿ’ ಎಂದು ಕೇಳಿಕೊಂಡರು. ಅದಕ್ಕೆ ಮಾದೇಗೌಡರು- ‘ನಾನು ಹೇಳಿದರೆ ರೈತರು ಸುಮ್ಮನಾಗೋದಿಲ್ಲ. ನೀವೇ ಹೇಳಿ ನೋಡಿ. ಶನಿವಾರ ಏನಾಗ್ತದೋ ಹೇಳೋಕ್ಕಾಗಲ್ಲ. ರಾಜೀನಾಮೆ ಕೊಟ್ಟು ಬಂದು, ರೈತರ ಜೊತೆ ನಿಲ್ಲಿ. ಹೀರೋ ಆಗಿ’ ಅಂತ ಕಡ್ಡಿ ತುಂಡುಮಾಡಿದಂತೆ ಹೇಳಿಬಿಟ್ಟರು. ಈ ಮಾತಿಗೆ ಕೃಷ್ಣ ಬಳಿ ಮರುತ್ತರ ಇರಲಿಲ್ಲ !

(ಇನ್ಫೋ ವಾರ್ತೆ)

ಮುಖಪುಟ / ಕಾವೇರಿ ಕನ್ನಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X