ತಮಿಳುನಾಡಿಗೆ ನಿತ್ಯ ಕಾವೇರಿ: ಚರ್ಚಿಸಲು ಶನಿವಾರ ಸಂಪುಟ ಸಭೆ
ನವದೆಹಲಿ : ತಮಿಳುನಾಡಿಗೆ ಪ್ರತಿನಿತ್ಯ ಕಾವೇರಿ ನೀರು ಬಿಡಬೇಕೆಂದು ಸುಪ್ರಿಂಕೋರ್ಟ್ ಆದೇಶಿಸಿದ ಬೆನ್ನಲ್ಲೇ, ಈ ಬಗ್ಗೆ ನಿರ್ಣಯ ತೆಗೆದುಕೊಳ್ಳಲು ಶನಿವಾರ ಸಚಿವ ಸಂಪುಟ ಸಭೆ ಕರೆಯಲು ಕರ್ನಾಟಕ ಸರ್ಕಾರ ನಿರ್ಧರಿಸಿತು.
ತಮಿಳುನಾಡಿಗೆ ಪ್ರತಿದಿನ 9,000 ಕ್ಯೂಸೆಕ್ಸ್ ನೀರು ಬಿಡಬೇಕೆಂದು ಶುಕ್ರವಾರ ಸುಪ್ರಿಂಕೋರ್ಟ್ ಆದೇಶಿಸಿದೆ. ಕಾವೇರಿ ನದಿ ಪ್ರಾಧಿಕಾರದ ಆದೇಶದಂತೆ ನಾವು ತಮಿಳುನಾಡಿಗೆ ನೀರು ಬಿಡಬೇಕಿರುವುದು ವಾರದ ಪಾಳಿಯಲ್ಲಿ. ಹೀಗಾಗಿ ನಮ್ಮ ಬಳಿ ಸಾಕಷ್ಟು ಸಂಯವಿದೆ. ಮುಂದೇನು ಮಾಡಬೇಕು ಎಂಬುದನ್ನು ಶನಿವಾರ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಕಾನೂನು ಸಚಿವ ಡಿ.ಬಿ.ಚಂದ್ರೇಗೌಡ ಹೇಳಿದರು.
ಪ್ರಾಧಿಕಾರದ ಆದೇಶವನ್ನು ಪುನರ್ ಪರಿಶೀಲಿಸುವಂತೆ ಕಾವೇರಿ ನದಿ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಪ್ರಧಾನಿ ಎ.ಬಿ.ವಾಜಪೇಯಿ ಅವರ ಮೇಲೆ ಮತ್ತೆ ಒತ್ತಡ ತರಲಾಗುವುದು ಎಂದೂ ಚಂದ್ರೇಗೌಡ ತಿಳಿಸಿದರು.
ಮಂಡ್ಯದಲ್ಲಿ ಭುಗಿಲೆದ್ದ ಪ್ರತಿಭಟನೆಯ ಬೆಂಕಿ
ನಿತ್ಯ ನೀರು ಬಿಡಬೇಕೆಂದು ಮತ್ತೆ ಸುಪ್ರಿಂಕೋರ್ಟ್ ಆದೇಶ ಹೊರಬಿದ್ದಿದ್ದೇ ತಡ, ಮಂಡ್ಯ ಜಿಲ್ಲೆಯ ರೈತರು, ವಿದ್ಯಾರ್ಥಿಗಳು ಮತ್ತು ಚಳವಳಿಕಾರರು ಪ್ರತಿಭಟನೆಯನ್ನು ತೀವ್ರಗೊಳಿಸಿದರು. ರಸ್ತೆಗಳಲ್ಲಿ ಟೈರುಗಳನ್ನು ಸುಡುವುದು ಮತ್ತು ರಸ್ತೆ ತಡೆ ಹಠಾತ್ತನೆ ಚುರುಕಾಯಿತು. ಇದರಿಂದ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಕೆಲ ಕಾಲ ಸಂಚಾರಕ್ಕೆ ಅಡ್ಡಿಯಾಯಿತು.
ಸಕಲ ತ್ಯಾಗಕ್ಕೂ ಸರ್ಕಾರ ಸಿದ್ಧವಾಗಲಿ : ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡಕೂಡದು. ಪದ ತ್ಯಾಗ ಮಾಡುವ ಪರಿಸ್ಥಿತಿ ಬಂದರೂ ಮುಖ್ಯಮಂತ್ರಿ ಕೃಷ್ಣ ಜಗ್ಗಬಾರದು. ನಾವೆಲ್ಲಾ ಶನಿವಾರದ ಸಂಪುಟ ಸಭೆಯ ನಿರ್ಮಯದವರೆಗೆ ಕಾಯುತ್ತೇವೆ. ಮುಂದೇನು ಅಂತ ನಿರ್ಧರಿಸುತ್ತೇವೆ ಎಂದು ಮಾಜಿ ಸಂಸದ ಮಾದೇಗೌಡ ಎಚ್ಚರಿಸಿದರು.
(ಪಿಟಿಐ)
ಮುಖಪುಟ / ಕಾವೇರಿ ಕನ್ನಡಿ