ಠಪೋರಿ ರಿಪೇರಿಯಲ್ಲಿರುವ ಹಂಸ್ರ ಮುಫತ್ ಸಲಹೆ...
‘ಒಳ್ಳೆಯ ಸಂಸ್ಕೃತಿ ಅಳವಡಿಸಿಕೊಳ್ಳುವುದರ ಮೂಲಕ ಭಯೋತ್ಪಾದನೆ ನಿಗ್ರಹ ಮಾಡಬಹುದು. ಈ ನಿಟ್ಟಿನಲ್ಲಿ ಯುವ ಸಮುದಾಯದ ಪಾತ್ರ ದೊಡ್ಡದು. ಯುವ ಸಮುದಾಯ ಭಯೋತ್ಪಾದಕತೆ ವಿರುದ್ಧ ಸಾಂಸ್ಕೃತಿಕ ಹೋರಾಟ ಮಾಡಬೇಕು....’
ಹಂಸಲೇಖ ಮಾತು ಕವಿಯ ಧಾಟಿಯಲ್ಲಿರಲಿಲ್ಲ. ಸವಿಯಾಗೂ ಇರಲಿಲ್ಲ. ತಯಾರಿಯಿಲ್ಲದೆ ಹಠಾತ್ತನೆ ಬಂದು ಕಾರ್ಯಕ್ರಮದಲ್ಲಿ ಔಪಚಾರಿಕವಾಗಿ ಮಾತಾಡಲೇಬೇಕು ಎಂಬ ದಾಕ್ಷಿಣ್ಯಕ್ಕೆ ಉದುರಿದಂತೆ ಇತ್ತು ಅವರ ಮಾತಿನ ವರಸೆ. ಈಗ ಹಂಸಲೇಖ ಬಿಡುವಾಗಿಲ್ಲ. ಡಬ್ಬದಲ್ಲಿರುವ ಮಗನ ‘ಠಪೋರಿ’ ರಿಪೇರಿಯ ಕೆಲಸ ಒಂದು ಕಡೆ. ಈಟಿವಿಯಲ್ಲಿ ಶುರುವಾಗಿರುವ ‘ಪ್ರೀತಿಗಾಗಿ’ ದೈನಿಕ ಧಾರಾವಾಹಿಯ ಫೈನ್ ಟ್ಯೂನಿಂಗ್ ಇನ್ನೊಂದು ಕಡೆ. ಜೊತೆಗೆ ಎರಡನೇ ವರ್ಷದ ಎಂ.ಎ.ಓದು. ಅವರು ಭಾರೀ ಬಿಜಿ.
ಇಷ್ಟೆಲ್ಲಾ ಕೆಲಸದ ಹೊರೆ ಹೊತ್ತುಕೊಂಡಿದ್ದರೂ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಮತ್ತು ಬೆಂಗಳೂರು ಆಕಾಶವಾಣಿ ಆಯೋಜಿಸಿದ್ದ ‘ಯುವಸ್ಪಂದನ’ ಕಾರ್ಯಕ್ರಮವನ್ನು ಉದ್ಘಾಟಿಸಲು ಮಂಗಳವಾರ ಹಂಸ್ ಬಂದಿದ್ದರು. ಆಗಲೇ ಅವರು ತಯಾರಿಯೇ ಇಲ್ಲವೇನೋ ಎಂಬಂಥಾ ಮಾತಾಡಿದ್ದು.
ಅಲ್ಲೆಲ್ಲಾ ಹಂಸ್ ಮುಫತ್ತಾಗಿ ಯುವ ಜನತೆಗೆ ಸಲಹೆ ಕೊಟ್ಟರು. ಬೆಂಗಳೂರಲ್ಲಿ ಉಗ್ರರ ಕಾಟದ ಬಿಸಿ ಇವರಿಗೂ ತಟ್ಟಿರುವುದು ಇದರಿಂದ ಖಾತ್ರಿಯಾದಂತಾಯಿತು. ಉಗ್ರರ ಕುರಿತು ಆಶು ಕವನ ಹೇಳುವ ಮೂಡಂತೂ ಅವರಿಗಿರಲಿಲ್ಲ.
ಸದುದ್ದೇಶ ಮತ್ತು ಸಂಗೀತಕ್ಕೆ ಸಾವಿಲ್ಲ. ಆಟ, ಹಾಡು, ಕಲೆ ಇವು ಯುವ ಜನತೆ ಸರಿಯಾಗಿ ವರ್ತಿಸಲು ದಿಕ್ಕು ತೋರುತ್ತವೆ ಎಂದು ಹಂಸ್ ಸಲಹೆ ಕೊಟ್ಟಾಗ, ಹಾಡೊಂದಕ್ಕೆ ಯುವಕರಿಂದ ಡಿಮ್ಯಾಂಡ್ ಏನೋ ಬಂದಿತು. ಆದರೆ ಹಂಸ್ ಹಾಡುವ ಗೊಡವೆಗೆ ಹೋಗಲಿಲ್ಲ!
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...