ಕಾವೇರಿ: ಪ್ರಧಾನಿ ವಾಜಪೇಯಿಗೆಬಾಲಗಂಗಾಧರನಾಥ ಸ್ವಾಮಿ ಪತ್ರ
ಬೆಂಗಳೂರು : ಶತಮಾನದ ಹಿಂದಿನಿಂದಲೂ ರಾಜ್ಯವನ್ನು ಕಾಡುತ್ತಾ ಬಂದಿರುವ ಕಾವೇರಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಹಿಡಿಯಬೇಕು ಎಂದು ಆದಿಚುಂಚನಗಿರಿ ಮಠದ ಬಾಲ ಗಂಗಾಧರನಾಥ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.
ಈ ಹಿನ್ನೆಲೆಯಲ್ಲಿ ಸ್ವಾಮೀಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಪತ್ರ ಬರೆದಿದ್ದು, ಕಾವೇರಿ- ಮಹಾನದಿ ಸಂಪರ್ಕ ಯೋಜನೆಯನ್ನು ಕೈಗೆತ್ತಿಕೊಳ್ಳುವಂತೆ ಆಗ್ರಹಿಸಿದ್ದಾರೆ. ಈ ಯೋಜನೆಯನ್ನು ಕೈಗೆತ್ತಿಕೊಳ್ಳುವ ಮೂಲಕ ಕಾವೇರಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡ ಹಾಗಾಗುತ್ತದೆ ಎಂದಿರುವ ಸ್ವಾಮೀಜಿ, ಕಾವೇರಿ ಜಲ ವಿವಾದವನ್ನು ಶೀಘ್ರವೇ ಇತ್ಯರ್ಥಗೊಳಿಸಲು ವೈಯಕ್ತಿಕವಾಗಿ ತಾವೇ ಮಧ್ಯಪ್ರವೇಶಿಸಬೇಕು ಎಂದು ಪ್ರಧಾನಿಯವರನ್ನು ಕೋರಿದ್ದಾರೆ.
ಕಾವೇರಿ- ಮಹಾನದಿಗಳನ್ನು ಸಂಪರ್ಕಿಸಲು ಕುರಿತು ಈ ಹಿಂದೆ ಸ್ವಾಮೀಜಿ ಎರಡು ಪತ್ರಗಳನ್ನು ಪ್ರಧಾನಿಯವರಿಗೆ ಬರೆದಿದ್ದರು. ಆ ಬಗ್ಗೆ ಮತ್ತೆ ಪ್ರಸ್ತಾಪಿಸಿರುವ ಸ್ವಾಮೀಜಿ, ಈ ಯೋಜನೆ ಜಾರಿಗೊಂಡಲ್ಲಿ ದಕ್ಷಿಣದ ರಾಜ್ಯಗಳಲ್ಲಿ ಪದೇ ಪದೇ ಕಂಡು ಬರುವ ಬರ ಪರಿಸ್ಥಿತಿಗೆ ಶಾಶ್ವತ ಪರಿಹಾರ ಸಾಧ್ಯ.
ಈ ವಿಷಯಕ್ಕೆ ಸಂಬಂಧಿಸಿ ತಮಿಳುನಾಡು ಹಾಗೂ ಕರ್ನಾಟಕ ರೈತರ ಭಾವನೆಗಳು ನಾನಾ ರೀತಿಯಲ್ಲಿ ಸ್ಫೋಟಗೊಂಡಿದೆ. ಪರಿಸ್ಥಿತಿಯ ಎಷ್ಟು ಸಂಕೀರ್ಣ ವಾಗಿದೆ ಎಂದರೆ ಅಸಹನೀಯ ಪರಿಣಾಮಗಳನ್ನೆದುರಿಸಬೇಕಾಗುತ್ತದೆ. ಆದ್ದರಿಂದ ತಕ್ಷಣವೇ ತಾವು ಮಧ್ಯ ಪ್ರವೇಶಿಸಿ ಈ ವಿವಾದಕ್ಕೆ ಪರಿಹಾರ ದೊರಕಿಸಬೇಕು ಎಂದು ಸ್ವಾಮೀಜಿ ಹೇಳಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...