ಗಾಂಧಿ ಜಯಂತಿ ದಿನ ‘ಜಲಸಂವರ್ಧನೆ ಯೋಜನೆ’ ಪ್ರಾರಂಭ
ಬೆಂಗಳೂರು : ಗಾಂಧಿ ತಾತನ ಹುಟ್ಟುಹಬ್ಬದ ದಿನ ರಾಜ್ಯದ 8 ಜಿಲ್ಲೆಗಳಲ್ಲಿ ಜಲಸಂವರ್ಧನೆ ಯೋಜನೆಯನ್ನು ಕರ್ನಾಟಕ ಸರ್ಕಾರ ಶುರುಮಾಡಲಿದೆ. ಇದಕ್ಕೆ ವಿಶ್ವಬ್ಯಾಂಕ್ 670 ಕೋಟಿ ರುಪಾಯಿ ಧನ ಸಹಾಯ ನೀಡಿದೆ.
ಹಾವೇರಿ, ಬೀದರ್, ರಾಯಚೂರು, ತುಮಕೂರು, ಚಿತ್ರದುರ್ಗ, ಬಾಗಲಕೋಟೆ, ಕೊಪ್ಪಳ ಮತ್ತು ಕೋಲಾರ ಜಿಲ್ಲೆಗಳ 26 ಕೆರೆಗಳ ಅಭಿವೃದ್ಧಿಯ ಮೂಲಕ ಯೋಜನೆಯ ಮೊದಲ ಹಂತವನ್ನು ಜಾರಿಗೆ ತರಲಾಗುವುದು ಎಂದು ಸಣ್ಣ ನೀರಾವರಿ ಹಾಗೂ ಗೃಹ ಖಾತೆ ಸಚಿವ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಮೊದಲ ಹಂತಕ್ಕೆ 85 ಲಕ್ಷ ರುಪಾಯಿ ಖರ್ಚು ಮಾಡಲಾಗುವುದು. ಇನ್ನಾರು ವರ್ಷಗಳಲ್ಲಿ ಎಂಟೂ ಜಿಲ್ಲೆಗಳ 2000 ಕೆರೆಗಳನ್ನು ಅಭಿವೃದ್ಧಿ ಪಡಿಸಲಾಗುವುದು. ಈ ಮಹತ್ವದ ಯೋಜನೆಯಿಂದ 72 ಸಾವಿರ ಹೆಕ್ಟೇರ್ ಇಳುವರಿ ಭೂಮಿಗೆ ನೀರಿನ ಲಾಭವಾಗಲಿದೆ. ಇದರ ಜೊತೆಗೆ ಪ್ರತಿ ಹೋಬಳಿಯ ಒಂದು ಕೆರೆಯ ಹೂಳೆತ್ತುವ ‘ರೈತ ಕಾಯಕ ಕೆರೆ ಯೋಜನೆ’ಯನ್ನೂ ಸರ್ಕಾರ ಜಾರಿಗೆ ತರಲಿದೆ ಎಂದರು.
ನಾಗಪ್ಪ ಬಿಡುಗಡೆಗೆ ಫರ್ನಾಂಡಿಸ್ ಸಲಹೆ : ಕಳೆದ 38 ದಿನಗಳಿಂದ ವೀರಪ್ಪನ್ ಒತ್ತೆಯಾಳಾಗಿರುವ ಮಾಜಿ ಶಾಸಕ ನಾಗಪ್ಪನವರನ್ನು ಬಿಡುಗಡೆ ಮಾಡುವ ವಿಷಯದಲ್ಲಿ ಕೇಂದ್ರ ಸರ್ಕಾರ ಮಧ್ಯೆ ಪ್ರವೇಶಿಸಬೇಕು ಎಂದು ಮುಖ್ಯಮಂತ್ರಿ ಕೃಷ್ಣ ರಕ್ಷಣಾ ಸಚಿವ ಜಾರ್ಜ್ಫರ್ನಾಂಡಿಸ್ ಅವರನ್ನು ಕೇಳಿಕೊಂಡಿದ್ದಾರೆ.
ಬುಡಕಟ್ಟು ಜನಾಂಗದ ಜೊತೆ ಕೆಲಸ ಮಾಡುತ್ತಿರುವ ಕೆಲವು ಸರ್ಕಾರೇತರ ಸಂಸ್ಥೆಗಳ ನೆರವನ್ನು ಪಡೆದು, ನಾಗಪ್ಪನವರನ್ನು ಬಿಡಿಸಿಕೊಂಡು ಬರಬೇಕು ಎಂದು ಜಾರ್ಜ್ ಅವರನ್ನು ಕೇಳಿಕೊಳ್ಳಲಾಗಿದೆ. ಇದಕ್ಕೆ ಅವರು ಸ್ಪಂದಿಸುವ ಭರವಸೆ ಇದೆ ಎಂದು ಖರ್ಗೆ ಹೇಳಿದರು.
(ಪಿಟಿಐ)
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...