ಲಾರಾ ಗೈರು ಹಾಜರಿಯಲ್ಲಿ ಬೆಂಗಳೂರಿಗೆ ಬಂದಿಳಿದ ಹೂಪರ್ ಬಳಗ
ಬೆಂಗಳೂರು : ಸ್ಟಾರ್ ಬ್ಯಾಟ್ಸ್ಮನ್ ಬ್ರಿಯಾನ್ ಲಾರ ಅವರ ಅನುಪಸ್ಥಿತಿ ವೆಸ್ಟಿಂಡೀಸ್ ತಂಡಕ್ಕೆ ಬಹುದೊಡ್ಡ ಹೊಡೆತವಾಗಿದೆ ಎಂದು ವೆಸ್ಟಿಂಡೀಸ್ ತಂಡದ ನಾಯಕ ಕಾರ್ಲ್ ಹೂಪರ್ ಹೇಳಿದ್ದಾರೆ.
ಭಾರತದಲ್ಲಿನ ಈ ಬಾರಿಯ ಪ್ರವಾಸ ವಿಂಡೀಸ್ ಪಾಲಿಗೆ ಕಬ್ಬಿಣದ ಕಡಲೆಯಾಗಲಿದೆ ಎಂದು ಮಂಗಳವಾರ (ಅ.01) ಸುದ್ದಿಗಾರರೊಂದಿಗೆ ಮಾತನಾಡಿದ ಹೂಪರ್ ತಿಳಿಸಿದರು. ಅ.4 ರ ಶುಕ್ರವಾರದಿಂದ ಮಂಡಳಿ ಅಧ್ಯಕ್ಷರ-11 ತಂಡದೊಂದಿಗೆ ನಡೆಯುವ ಪಂದ್ಯಕ್ಕಾಗಿ ಹೂಪರ್ ತಮ್ಮ ತಂಡದೊಂದಿಗೆ ಮಂಗಳವಾರ ಬೆಳಗ್ಗೆ ಬೆಂಗಳೂರಿಗೆ ಆಗಮಿಸಿದರು. ಮಹಮ್ಮದ್ ಕೈಪ್ ಮಂಡಳಿ ಇಲವೆನ್ ತಂಡದ ನಾಯಕತ್ವ ವಹಿಸುವರು.
ಲಾರಾ ಅತ್ಯಂತ ಅನುಭವಿ ಆಟಗಾರ. ಆತನ ಸೇವೆಯನ್ನು ನಾವು ಕಳೆದುಕೊಂಡಿದ್ದೇವೆ. ಆದರೆ ಈ ಮುನ್ನ ಕೂಡ ಲಾರಾ ಅನುಪಸ್ಥಿತಿಯಲ್ಲಿ ಭಾರತದೊಂದಿಗೆ ವಿಂಡೀಸ್ ಹಲವಾರು ಟೆಸ್ಟ್ ಪಂದ್ಯಗಳನ್ನು ಆಡಿದೆ. ಯುವ ಆಟಗಾರರನ್ನು ಹೊಂದಿರುವ ವಿಂಡೀಸ್ ತಂಡ ಪ್ರಬಲ ಹೋರಾಟ ನೀಡುವುದು ಎಂದು ಹೂಪರ್ ಆತ್ಮ ವಿಶ್ವಾಸ ವ್ಯಕ್ತಪಡಿಸಿದರು.
ಭಾರತದಲ್ಲಿ ಭಾರತ ತಂಡವನ್ನು ಮಣಿಸುವುದು ಅತ್ಯಂತ ಕಷ್ಟ ಎನ್ನುವುದನ್ನು ಒಪ್ಪಿಕೊಂಡ ಹೂಪರ್, ತಾವು ಯಾವುದೇ ಪೂರ್ವ ನಿರ್ಧಾರಗಳನ್ನು ಹೊಂದಿಲ್ಲ . ನಾವು ಉತ್ತಮ ಕ್ರಿಕೆಟ್ ಆಡಲಿದ್ದೇವೆ ಎಂದರು. ವಿಶ್ವಕಪ್ ಪಂದ್ಯಾವಳಿಯನ್ನು ಭಾರತ ಗೆಲ್ಲುವ ಕುರಿತು ಭವಿಷ್ಯ ಹೇಳುವುದು ಕಷ್ಟ ಎಂದ ಹೂಪರ್, ಭಾರತವನ್ನು ಮಣಿಸುವುದು ಯಾವುದೇ ತಂಡಕ್ಕಾದರೂ ಕಷ್ಟವಾದ ವಿಷಯ ಎಂದು ಮಾರ್ಮಿಕವಾಗಿ ನುಡಿದರು.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...