ತುಳುವರ ಹೋರಾಟಕ್ಕೆ ಈಗ ಡಾ.ವಾಮನ ನಂದಾವರರ ನೇತೃತ್ವ
ಉಡುಪಿ : ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ತುಳು ಭಾಷೆಯನ್ನು ಸೇರಿಸಲು ಒತ್ತಾಯಿಸಿ ಡಿಸೆಂಬರ್ 24, 25ರಂದು ದಿಲ್ಲಿಯಲ್ಲಿ ಹೋರಾಟ ನಡೆಸಲಾಗುವುದು ಎಂದು ರಾಜ್ಯ ತುಳು ಅಕಾಡೆಮಿಯ ಅಧ್ಯಕ್ಷ ಡಾ. ವಾಮನ ನಂದಾವರ ತಿಳಿಸಿದ್ದಾರೆ.
ಅವರು ಭಾನುವಾರ ಅ. ಬಾಲಕೃಷ್ಣ ಶೆಟ್ಟಿ ಪೊಳಲಿ ಸ್ಮರಣಾರ್ಥ ಎಂಜಿಎಂ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ತುಳು ಅಕಾಡೆಮಿ ಮತ್ತು ತುಳು ಸಂಘಟನೆಗಳ ನಿಯೋಗ ದಿಲ್ಲಿಯಲ್ಲಿ ಸಂಬಂಧಿಸಿದವರಿಗೆ ಮನವಿ ಮಾಡಿಕೊಳ್ಳಲಿದೆ. ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸುವ ನಿಟ್ಟಿನಲ್ಲಿ ಕರಾವಳಿಯ ತುಳುವ ಸಂಘಟನೆಗಳೂ ಬೆಂಬಲ ಸೂಚಿಸಿವೆ ಎಂದು ನಂದಾವರ ಹೇಳಿದರು.
ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ತುಳು ಭಾಷೆಯನ್ನು ಸೇರಿಸಬೇಕು ಎಂಬುದು ತುಳುವರ ದಶಕಗಳ ಹಿಂದಿನ ಆಗ್ರಹ ಎಂದ ಸಾಹಿತಿ, ಸ್ವಾತಂತ್ರ್ಯ ಹೋರಾಟಗಾರ ಕೈಯ್ಯಾರ ಕಿಞ್ಞಣ್ಣ ರೈ ಸಮಾರಂಭವನ್ನು ಉದ್ಘಾಟಿಸಿದರು. ಸಂಸ್ಕಾರವನ್ನು ಬೆಳೆಸಿಕೊಂಡಾಗ ಮಾತ್ರ ಮನುಷ್ಯ ಬೆಳೆಸಿಕೊಳ್ಳಲು ಸಾಧ್ಯ ಎಂದು ರೈ ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಅ. ಬಾಲಕೃಷ್ಣ ಶೆಟ್ಟಿ ಪೊಳಲಿ ಅವರ ತೆಲ್ಪು ತೆಲಿಕೆದ ಕಥೆಕುಲು, ಹಾಗೂ ಎನ್.ಪಿ. ಶೆಟ್ಟಿ ಮೂಲ್ಕಿ ರಚಿತ ಅ. ಬಾ.ಶೆಟ್ಟಿ ಪೊಳಲಿ ಬದುಕು- ಸಾಧನೆ ಕೃತಿಯನ್ನು ಕೇಂದ್ರ ಸಾಹಿತ್ಯ ಅಕಾಡೆಮಿಯ ಸದಸ್ಯ ಪ್ರೊ. ಮುರಳೀಧರ್ ಉಪಾಧ್ಯ ಹಿರಿಯಡ್ಕ ಪರಿಚಯಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...