ವಾಸ್ತವಸ್ಥಿತಿ ಸಮೀಕ್ಷೆಗೆ ಸಹಕರಿಸಿ: ತಮಿಳ್ನಾಡಿಗೆ ಸುಪ್ರಿಂಕೋರ್ಟ್ ಆದೇಶ
ನವ ದೆಹಲಿ : ಕಾವೇರಿ ನದಿ ನೀರು ವಿವಾದ ಕುರಿತಂತೆ ಮಹತ್ವದ ವಿಚಾರಣೆ ನಡೆಸುತ್ತಿರುವ ಸುಪ್ರಿಂಕೋರ್ಟ್ ಸೋಮವಾರ(ಸೆ.30) ದ ವಿಚಾರಣೆಯಲ್ಲಿ - ತಮಿಳುನಾಡಿನಲ್ಲಿನ ಮೆಟ್ಟೂರು ಜಲಾಶಯದಲ್ಲಿನ ಜಲ ಸಂಗ್ರಹದ ವಾಸ್ತವ ಸ್ಥಿತಿಯನ್ನು ಅರಿಯಲು ಕಾವೇರಿ ಉಸ್ತುವಾರಿ ಸಮಿತಿಗೆ ಸಹಕರಿಸುವಂತೆ ತಮಿಳುನಾಡು ಸರ್ಕಾರಕ್ಕೆ ತಿಳಿಸಿದೆ.
ನೀರಿನ ವಾಸ್ತವ ಸ್ಥಿತಿ ಪರಿಶೀಲನೆಗೆ ಪ್ರಧಾನಿ ಅವರು ಕಳುಹಿಸಿದ್ದ ಉಸ್ತುವಾರಿ ಸಮಿತಿಗೆ ಸಹಕಾರ ನೀಡದ ತಮಿಳುನಾಡು ಸರ್ಕಾರದ ತೀರ್ಮಾನದ ಕುರಿತು ಕಳವಳ ವ್ಯಕ್ತಪಡಿಸಿದ ಸುಪ್ರಿಂಕೋರ್ಟ್ನ ತ್ರಿಸದಸ್ಯರ ನ್ಯಾಯಪೀಠ, ಸಮೀಕ್ಷೆಯನ್ನು ನಡೆಸಿ ಅಕ್ಟೋಬರ್ 1 ರೊಳಗೆ ಪ್ರಧಾನಿಗೆ ವರದಿ ಸಲ್ಲಿಸುವಂತೆ ಉಸ್ತುವಾರಿ ಸಮಿತಿಗೆ ಸೂಚಿಸಿತು. ನ್ಯಾಯಮೂರ್ತಿಗಳು ಬಿ.ಎನ್.ಕೃಪಾಲ್, ಕೆ.ಜಿ.ಬಾಲಕೃಷ್ಣನ್ ಹಾಗೂ ಅರಿಜಿತ್ ಪಸ್ಯತ್ ತ್ರಿಸದಸ್ಯ ಪೀಠದ ಸದಸ್ಯರು.
ಸಮೀಕ್ಷೆ ನಡೆಸುವ ಉಸ್ತುವಾರಿ ಸಮಿತಿ, ಪ್ರಧಾನಿಯವರಿಗೆ ಸಲ್ಲಿಸುವ ವರದಿಯ ಪ್ರತಿಯಾಂದನ್ನು ಮುಂದಿನ ವಿಚಾರಣೆಗೆ ಅನುವಾಗುವಂತೆ ಅಕ್ಟೋಬರ್ 4ರೊಳಗೆ ನ್ಯಾಯಲಯಕ್ಕೆ ಸಲ್ಲಿಸುವಂತೆಯೂ ತ್ರಿಸದಸ್ಯ ಪೀಠ ಆದೇಶಿಸಿದೆ.
ತಮಿಳುನಾಡಿನಿಂದ ನ್ಯಾಯಾಂಗ ನಿಂದನೆ ಆರೋಪ ಎದುರಿಸುತ್ತಿರುವ ಕರ್ನಾಟಕದ ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ , ಜಲ ಸಂಪನ್ಮೂಲ ಸಚಿವ ಎಚ್ಕೆ.ಪಾಟೀಲ್ ಹಾಗೂ ರಾಜ್ಯದ ಮುಖ್ಯ ಕಾರ್ಯದರ್ಶಿ ಅವರು ಮೂರು ದಿನಗಳೊಳಗೆ ತಮ್ಮ ಪ್ರತಿಕ್ರಿಯೆಯನ್ನು ಸಲ್ಲಿಸುವಂತೆ ನ್ಯಾಯಾಲಯ ಸೂಚಿಸಿದೆ.
(ಪಿಟಿಐ)
ಮುಖಪುಟ / ಕಾವೇರಿ ಕನ್ನಡಿ