ಬೆಂಗಳೂರಲ್ಲಿ ಗುಂಡಿನ ಚಕಮಕಿ, ಇಮಾಂ ಆಲಿ ಸೇರಿ 5ಉಗ್ರರ ಸಾವು
ಬೆಂಗಳೂರು : ಕೊಯಮತ್ತೂರು ಬಾಂಬ್ ಸ್ಫೋಟಕ್ಕೆ ಸಂಬಂಧಿಸದವರು ಎನ್ನಲಾದ ಐವರು ಉಗ್ರಗಾಮಿಗಳನ್ನು ತಮಿಳುನಾಡು ಹಾಗೂ ಕರ್ನಾಟಕ ಪೊಲೀಸರು ಭಾನುವಾರ (ಸೆ.29) ಬೆಳಗಿನ ಜಾವ ಜಂಟಿ ಕಾರ್ಯಾಚರಣೆಯಲ್ಲಿ ಗುಂಡಿಟ್ಟು ಕೊಂದಿದ್ದಾರೆ. ಸತ್ತ ಉಗ್ರಗಾಮಿಗಳಲ್ಲಿ ಓರ್ವ ಮಹಿಳೆ ಸೇರಿದ್ದಾಳೆ.
ಉಗ್ರಗಾಮಿಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಸಬ್ ಇನ್ಸ್ಪೆಕ್ಟರ್ ಸೇರಿದಂತೆ 13 ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. . ಸುಮಾರು ಒಂದು ಗಂಟೆ ಕಾಲ ಕಾರ್ಯಾಚರಣೆ ನಡೆಯಿತು.
ನಗರದ ಸಂಜಯನಗರ ಬಡಾವಣೆಯ ಮನೆಯಾಂದರಲ್ಲಿ ಅಡಗಿದ್ದ ಉಗ್ರಗಾಮಿಗಳ ಮೇಲೆ ಪೊಲೀಸರು ದಾಳಿ ನಡೆಸಿದಾಗ, ಉಗ್ರಗಾಮಿಗಳು ಗುಂಡು ಹಾರಿಸಿದರು. ಈ ದಾಳಿಗೆ ಪ್ರತಿಯಾಗಿ ಪೊಲೀಸರು ಗುಂಡು ಹಾರಿಸಿದಾಗ ಐವರು ಉಗ್ರಗಾಮಿಗಳು ಸಾವಿಗೀಡಾದರು ಎಂದು ನಗರ ಜಂಟಿ ಪೊಲೀಸ್ ಕಮೀಷನರ್ ಜೆ.ವಿ.ಗಾಂವ್ಕರ್ ಸುದ್ದಿಗಾರರಿಗೆ ತಿಳಿಸಿದರು.
ಇಮಾಮ್ ಆಲಿ ಸೇರಿದಂತೆ ಸತ್ತ ಉಗ್ರಗಾಮಿಗಳು ಕೊಯಮತ್ತೂರು ಬಾಂಬ್ ಸ್ಫೋಟದಲ್ಲಿ ಭಾಗಿಯಾಗಿರುವ ಶಂಕೆಯಿದೆ. ಆಲಿ ತಲೆಗೆ ಐದು ಲಕ್ಷ ರುಪಾಯಿಗಳ ಬಹುಮಾನ ಘೋಷಿಸಲಾಗಿತ್ತು . ಮೃತರ ಬಳಿಯಿಂದ ಎಕೆ-47 ರೈಫಲ್ ಹಾಗೂ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಸುಮಾರು ಮೂರು ತಿಂಗಳಿಂದ ಈ ಉಗ್ರಗಾಮಿಗಳು ಬೆಂಗಳೂರಿನಲ್ಲಿ ವಾಸವಾಗಿದ್ದ ಸಾಧ್ಯತೆಯಿದೆ ಎಂದು ಭಾನುವಾರ ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಗಾಂವ್ಕರ್ ಹೇಳಿದರು.
ಮೃತ ಉಗ್ರಗಾಮಿಗಳು ಚೆನ್ನೈನ ಆರೆಸ್ಸೆಸ್ ಕಚೇರಿಯ ಮೇಲೆ ನಡೆದ ಬಾಂಬ್ ಸ್ಫೋಟದಲ್ಲೂ ಭಾಗಿಯಾಗಿದ್ದಾರೆ ಎಂದು ಉಪ ಪೊಲೀಸ್ ಕಮೀಷನರ್ ಗೋಪಾಲ್ ಹೊಸೂರ್ ತಿಳಿಸಿದ್ದಾರೆ.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...