ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ 108 ಗಣೇಶ ಸಮೂಹ ಪೂಜೆ
*ಮವಾಸು
ಬಹುಶಃ ಅಮೇರಿಕಾದಲ್ಲೇ ಕೇಳರಿಯದಂತ ಕಾರ್ಯಕ್ರಮವೊಂದು ಸೆಪ್ಟಂಬರ್ 16ರ ಬೆಳಿಗ್ಗೆ 10 ಘಂಟೆಗೆ ಸೆರಿಟೋಸ್ನ ಸನಾತನ ಧರ್ಮ ದೇವಸ್ಥಾನದಲ್ಲಿ ನಡೆಯಿತು. 108 ಕನ್ನಡ ದಂಪತಿಗಳು ಬಹಳ ಉತ್ಸಾಹದಿಂದ ಸಂಸಾರ ಸಮೇತರಾಗಿ ಸಮಯಕ್ಕೆ ಸರಿಯಾಗಿ ಬಂದು ಸಮೂಹ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಅದನ್ನು ನೋಡುವವರಿಗೆ ಅದೇ ಒಂದು ದೊಡ್ಡ ಹಬ್ಬವಾಗಿತ್ತು. ಈ ಕಾರ್ಯಕ್ರಮದ ಪ್ರಾಯೋಜಕರು ದಕ್ಷಿಣ ಕ್ಯಾಲಿಫೋರ್ನಿಯಾದ ಕರ್ನಾಟಕ ಸಾಂಸ್ಕೃತಿಕ ಸಂಘ.
ಈ ಕಾರ್ಯಕ್ರಮ ಒಂದು ಅತಿ ಸೂಕ್ಷ್ಮವಾಗಿ ಆಲೋಚಿಸಿ ಯೋಜನೆ ಮಾಡಿದಂತ ಕಾರ್ಯ. ಕಾರ್ಯಕ್ರಮದ ಪ್ರಾರಂಭ ಸರಿಯಾಗಿ 10 ಘಂಟೆಗೆ ಆಗಿದ್ದು ಕೆಲವು ಟೀಕಾಕಾರ ಸದಸ್ಯರುಗಳನ್ನು ಮುಗ್ಧಗೊಳಿಸಿತ್ತು. ಕಾರ್ಯಕ್ರಮದ ಆರಂಭದಲ್ಲಿ ಚೀಟಿಯನ್ನು ಎತ್ತುವ ಮೂಲಕ 108 ದಂಪತಿಗಳಲ್ಲಿ ಒಂದು ಜೋಡಿಯನ್ನ್ನು ಮುಖ್ಯಪೂಜೆಗೆ ಕೂರಿಸಲಾಯಿತು. ಈ ಅದೃಷ್ಟದ ದಂಪತಿಗಳೆಂದರೆ ವಲ್ಲೀಶ ಶಾಸ್ತ್ರಿ ಮತ್ತು ವಿದ್ಯಾಶಾಸ್ತ್ರಿ.
ದೇವರೇ ಕೊಟ್ಟ ವರ ಎಂಬಂತೆ ಮುಖ್ಯ ಪೂಜೆಯನ್ನು ಮಾಡಲು ವಲ್ಲೀಶ-ವಿದ್ಯಾ ದಂಪತಿಗಳು ಒಪ್ಪಿಕೊಂಡರು. ಪೂಜೆ ಮಾಡಿಸಿದವರು ಅನಂತ ಹೊಸ್ಕೆರೆಯವರು. ಎಲ್ಲರೂ ಭಕ್ತಿಯಿಂದ ಮಾಡಿದ ಪೂಜೆ ಸುಮಾರು ಒಂದೂವರೆ ಘಂಟೆಗಳ ಕಾಲ ನಡೆಯಿತು. ಮಹಾಮಂಗಳಾರತಿಗಿಂತ ಮುಂಚೆ 60ಕ್ಕೂ ಹೆಚ್ಚು ಕನ್ನಡ ಮಕ್ಕಳಿಂದ ನಡೆದ ದೇವ ಸ್ತುತಿ ಹಬ್ಬಕ್ಕೆ ಒಂದು ಮೆರಗನ್ನು ಕೊಟ್ಟಿತು. ಪೂಜೆಯ ನಂತರ ಸದಸ್ಯ ಅನ್ನಪೂರ್ಣೇಶ್ವರಿಯರಿಂದ ತಯಾರಾದ ಹಬ್ಬದ ಊಟ ಎಲ್ಲರಿಗೂ ಸಂತೋಷಪಡಿಸಿತ್ತು.
ಊಟದ ನಂತರ ನಡೆದ ಕಾರ್ಯಕ್ರಮ ಕಾವೇರಿ ಕನ್ನಡಸಂಘ, ಮೇರಿಲ್ಯಾಂಡ್, ಅರ್ಪಿಸಿದ ಗಿರೀಶ್ ಕಾರ್ನಾಡರ ನಾಟಕ ’ಯಯಾತಿ’. ನಾಟಕದ ಚುರುಕಾದ ಸಂಭಾಷಣೆ, ಅಚ್ಚುಕಟ್ಟಾದ ರಂಗ ವ್ಯವಸ್ಥೆ, ಬೆಳಕು ಹಾಗೂ ದಕ್ಷ ನಿರ್ದೇಶನ ಜನರನ್ನು ಮಹಾಭಾರತ ಲೋಕಕ್ಕೆ ಕರೆದೊಯ್ದಿತ್ತು.
ಮಧ್ಯದಲ್ಲಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳಾದ ಸೋಮಶೇಖರ್, ಸಂಘ ಮಾಡುತ್ತಿರುವ ಕಾರ್ಯವನ್ನು ಹೊಗಳಿದರು.
ಕಾರ್ಯಕ್ರಮದುದ್ದಕ್ಕೂ ಕನ್ನಡದ ಪ್ರಖ್ಯಾತ ಕವಿ- ಕಲಾವಿದರ (ದ.ರಾ.ಬೇಂದ್ರೆ, ಕುವೆಂಪು, ಶಿವರಾಮ ಕಾರಂತ, ಬಿ.ವಿ. ಕಾರಂತ,‰ ಇನ್ನೂ ಅನೇಕರ) ಭಾವಚಿತ್ರ, ಹಸ್ತಪ್ರತಿಗಳನ್ನು ಧಾರವಾಡದ ಮನೋಹರ ಗ್ರಂಥಮಾಲಾದ ಮಾಲೀಕರಾದ ಡಾ।। ರಮಾಕಾಂತ ಜೋಷಿಯವರು ಪ್ರದರ್ಶಿಸಿದವರು. ಬಹಳ ಅಪರೂಪದ ಈ ಸಂಗ್ರಹವನ್ನು ನೋಡುವ ಅವಕಾಶ ಸಿಕ್ಕಿದ್ದು ಸಂಘದ ಸದಸ್ಯರಿಗೆಲ್ಲಾ ಒಂದು ಅದೃಷ್ಟವೇ ಸರಿ.
ಯಶಸ್ವೀ ಕಾರ್ಯಕ್ರಮದ ಹೊಣೆ ಹೊತ್ತಿದ್ದವರು ಶಂಖಂ ಜಗನ್ನಾಥ್. ಅವರಿಗೆ ಸಂಘದ ಸದಸ್ಯರೆಲ್ಲರ ಪರವಾಗಿ ಅಭಿನಂದನೆಗಳು.
ಪೂರಕ
ಓದಿಗೆ-
ಬಹುರೂಪಿಯ
ಚಿತ್ರಹಾರ
1
ಬಹುರೂಪಿಯ
ಚಿತ್ರಹಾರ
2
ಮುಖಪುಟ / ಗೌರಿ ಗಣೇಶ