ಸಿಲಿಕಾನ್ವ್ಯಾಲಿಯಲ್ಲಿ ಖಾಲಿ ಬಿದ್ದಿರುವ ಮಾಹಿತಿ ತಂತ್ರಜ್ಞಾನ ಸೀಟುಗಳು
ಬೆಂಗಳೂರು : ಎಂಜಿನಿಯರಿಂಗ್ ಕಾಲೇಜು ತೆರೆಯಲು ಯದ್ವಾತದ್ವಾ ಅನುಮತಿ ಕೊಟ್ಟ ಸರ್ಕಾರವೇ ಈಗ ಹೇಳುತ್ತಿದೆ- 6500 ಸೀಟುಗಳನ್ನು ಕೇಳೋರೇ ಇಲ್ವಂತೆ !
ಉನ್ನತ ಶಿಕ್ಷಣ ಸಚಿವ ಡಾ. ಜಿ.ಪರಮೇಶ್ವರ ಗುರುವಾರ ಸುದ್ದಿಗಾರರ ಜೊತೆ ಮಾತಾಡುತ್ತಿದ್ದರು. ಹಿಂದಿನಂತೆ ಮಾಹಿತಿ ತಂತ್ರಜ್ಞಾನದ ಕೋರ್ಸಿಗೆ ಈಗ ಬೇಡಿಕೆ ಇಲ್ಲ. ಭರ್ತಿಯಾಗದೆ ಉಳಿದಿರುವ ಸೀಟುಗಳಲ್ಲಿ ಐಟಿ ಸೀಟುಗಳೂ ಉಂಟು ಎಂದರು.
ಸೀಟುಗಳು ಬಾಕಿ ಉಳಿದಿವೆ ಎಂದು ಪ್ರವೇಶ ನಿಯಮಗಳಲ್ಲಿ ಸಡಿಲಿಕೆ ಮಾಡಲಾಗದು. ಉನ್ನತ ಶಿಕ್ಷಣಕ್ಕೆ ಅರ್ಹ ಅಭ್ಯರ್ಥಿಗಳನ್ನೇ ಆರಿಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ವ್ಯವಸ್ಥೆಯ ಸುಧಾರೀಕರಣಕ್ಕೆ ಒತ್ತು ಕೊಡಬೇಕಿದೆ. ಅದಕ್ಕಾಗೇ ಒಂದು ಸಮಿತಿ ರಚಿತವಾಗಿದ್ದು, ಖುದ್ದು ತಾವೇ ಅದರ ಅಧ್ಯಕ್ಷ ಎಂದು ಸಚಿವರು ಹೇಳಿದರು.
ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಶಿಕ್ಷಣ ತಜ್ಞರನ್ನು ಸಂಪರ್ಕಿಸಿ, ಚರ್ಚಿಸಿ, ಉತ್ತಮ ಶಿಕ್ಷಣ ನೀತಿ ರೂಪಿಸಲು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಸಂಶೋಧನೆಗಾಗಿ ಸಲಹಾ ಏಜೆನ್ಸಿಗಳನ್ನು ವಿದ್ಯಾರ್ಥಿಗಳು ಮೊರೆ ಹೋಗುವ ಪ್ರಸಂಗವಿದೆ. ಇದನ್ನು ತಪ್ಪಿಸಿ, ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆಯನ್ನು ಪ್ರೋತ್ಸಾಹಿಸುವ ಬಗ್ಗೆ ಸರ್ಕಾರ ಚಿಂತಿಸುತ್ತಿದೆ ಎಂದರು.
ಆಡಿಟೆಡ್ ಲೆಕ್ಕ ಪತ್ರಗಳನ್ನು ವಿಶ್ವ ವಿದ್ಯಾಲಯಗಳು ಸರ್ಕಾರಕ್ಕೆ ಒದಗಿಸುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದೂ ಅವರು ತಿಳಿಸಿದರು.
(ಪಿಟಿಐ)
ಮುಖಪುಟ / ಕರ್ನಾಟಕ ಸಿಲಿಕಾನ್ ಕಣಿವೆ