ಮೈಸೂರು ದಸರಾ ಸಿದ್ಧತೆಗೆ ಜಯಲಲಿತಾ ಪ್ರತಿಕೃತಿ ದಹನದ ಹೊಗೆ !
ಮೈಸೂರು : ದಸರೆಗೆ ಉಳಿದಿರೋದು ಇನ್ನು ಹದಿನೈದೇ ದಿನ. ಇಷ್ಟು ಹೊತ್ತಿಗೆ ನಾಡಹಬ್ಬದ ನೆವದಲ್ಲಿ ನಿಗಿನಿಗಿಸಬೇಕಾಗಿದ್ದ ಕೃಷ್ಣರಾಜೇಂದ್ರ ವೃತ್ತದ ಆಜೂಬಾಜು ಟೈರುಗಳ ಹಾಗೂ ಡಜನ್ನುಗಟ್ಟಲೆ ಜಯಲಲಿತಾ ಪ್ರತಿಕೃತಿಗಳನ್ನು ಸುಟ್ಟ ಹೊಗೆ ದಟ್ಟೈಸಿದೆ.
ತಮಿಳುನಾಡಿಗೆ ನೀರು ಬಿಟ್ಟಾಗ ಶುರುವಾದ ಕಾವೇರಿ ಗಲಭೆ ಈಗ ಕೆಲವು ಮಂದಿಗೆ ನಿತ್ಯ ಚಾಳಿಯಾಗಿಹೋಗಿದೆ. ಮಂಡ್ಯದಲ್ಲಿ ನಿಜವಾಗಿ ಕಾವೇರಿಯ ಕಳಕೊಂಡರೆ ಬಿಸಿತಟ್ಟುವ ಮಂದಿ ಚಳವಳಿಕೆ ಕೂತಿದ್ದರೆ, ಮೈಸೂರಿನ ಪುಂಡ ಪೋಕರಿಗಳಿಗೆ ಜಯಲಲಿತಾ ಪ್ರತಿಕೃತಿ ದಹನವೇ ಟೈಂಪಾಸ್ ಆಗಿ ಹೋಗಿದೆ. ಟೈರು ಸುಟ್ಟಾಗ ಬರುವ ಕೆಟ್ಟ ಹೊಗೆಯ ನಡುವೆಯೇ ಹುಚ್ಚೆದ್ದು ಕುಣಿದಾಡುತ್ತಾರೆ !
ಮೈಸೂರಿನ ಮುಖ್ಯ ವ್ಯಾಪಾರಿಗಳೆಲ್ಲಾ ದಸರೆಗೆ ಬಣ್ಣ ಕೊಡುವ ಮೂಡಲ್ಲೇ ಇಲ್ಲ. ಸೆಪ್ಟೆಂಬರ್ 3ನೇ ತಾರೀಖಿನಿಂದ ವ್ಯಾಪಾರದ ಗಲ್ಲಾ ಭಣಭಣ. ಚಳವಳಿ ಮಾಡೋದು, ಕಾವೇರಿ ಉಳಿಸಿಕೊಳ್ಳೋದು ಎಲ್ಲಾ ಸರಿ. ಹಾಗಂತ ಸುಖಾಸುಮ್ಮನೆ ಜನರಿಗೆ ತೊಂದರೆ ಮಾಡೋದು ತರವಲ್ಲ. ಶಾಂತಿಯಿಂದಲೇ ಚಳವಳಿ ಮಾಡಲಿ. ಅಂಗಡಿ ತೆಗೆದರೆ ಸಾಕು, ದೋಚಿಕೊಳ್ಳೋಕೆ ಮುಂದೆ ಬರುವವರೂ ಉಂಟು ಅನ್ನೋದು ವ್ಯಾಪಾರಸ್ಥರ ಅಳಲು.
ಇವತ್ತಿನ ಪಥ ನೆಡೆದರೆ ಸಾಕು ಎಂಬ ಬಾವನೆ ಮಾಡಿರುವ ಮೈಸೂರಿಗರಲ್ಲಿ ದಸರೆ ಹತ್ತಿರ ಬಂದ ಸಡಗರ ಕಿಂಚಿತ್ತೂ ಇಲ್ಲ. ಆದರೂ, ನಗರ ಉಸ್ತುವಾರಿ ಹಾಗೂ ಸಹಕಾರಿ ಸಚಿವ ಎಚ್.ವಿಶ್ವನಾಥ್ ಇವತ್ತೂ ದಸರೆ ಜೋರೋ ಜೋರಾಗಿರುತ್ತೆ ಅಂತಲೇ ಹೇಳುತ್ತಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...