ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾವೇರಿ ಉಸ್ತುವಾರಿ ಸಮಿತಿ ಸತ್ಯ ಶೋಧನೆ, ಸೆ.27ರಂದು ವರದಿ

By Staff
|
Google Oneindia Kannada News

ಬೆಂಗಳೂರು : ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳ ಕಾವೇರಿ ನದಿ ಜಲಾಶಯಗಳ ನೀರಿನ ಸ್ಥಿತಿಗತಿ ಕುರಿತು ಸಮೀಕ್ಷೆ ನಡೆಸುತ್ತಿರುವ ಕಾವೇರಿ ಉಸ್ತುವಾರಿ ಸಮಿತಿ ಸೆಪ್ಟಂಬರ್‌ 27 ರಂದು ಪ್ರಧಾನಿ ವಾಜಪೇಯಿ ನೇತೃತ್ವದ ಕಾವೇರಿ ನದಿ ಪ್ರಾಧಿಕಾರಕ್ಕೆ ತನ್ನ ವರದಿ ಸಲ್ಲಿಸಲಿದೆ.

ವರದಿ ಸಲ್ಲಿಸುವ ಮುನ್ನ ಎರಡೂ ರಾಜ್ಯಗಳಲ್ಲಿನ ಜಲಾಶಯಗಳಿಗೆ ಭೇಟಿ ನೀಡಲಾಗುವುದು ಎಂದು ಉಸ್ತುವಾರಿ ಸಮಿತಿಯ ಅಧ್ಯಕ್ಷ ಹಾಗೂ ಕೇಂದ್ರ ಜಲ ಸಂಪನ್ಮೂಲ ಕಾರ್ಯದರ್ಶಿ ಎ.ಕೆ.ಗೋಸ್ವಾಮಿ ಮಂಗಳವಾರ (ಸೆ.24) ಸುದ್ದಿಗಾರರಿಗೆ ತಿಳಿಸಿದರು. ವಿಧಾನಸೌಧದಲ್ಲಿನ ಸಮಿತಿಯ ಕೊಠಡಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದ ನಂತರ ಗೋಸ್ವಾಮಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಸೆ.24 ರ ಮಂಗಳವಾರ ಕರ್ನಾಟಕದ ಕನ್ನಂಬಾಡಿ, ಕಬಿನಿ, ಹಾರಂಗಿ ಜಲಾಶಯಗಳಿಗೆ ಭೇಟಿ, ಸೆ.25 ರ ಗುರುವಾರ ತಮಿಳುನಾಡಿನ ಮೆಟ್ಟೂರು ಜಲಾಶಯದ ಸಮೀಕ್ಷೆ - ಇದು ಗೋಸ್ವಾಮಿ ನೇತೃತ್ವದ ಸಮಿತಿಯ ಕಾರ್ಯಕ್ರಮ. ಜಲ ಸಂಗ್ರಹ ಸಮೀಕ್ಷೆಯ ಸಂದರ್ಭದಲ್ಲಿ ಜಲಾನಯನ ಪ್ರದೇಶದ ರೈತರ ಅಭಿಪ್ರಾಯವನ್ನೂ ಪಡೆಯಲಾಗುವುದು ಎಂದು ಗೋಸ್ವಾಮಿ ತಿಳಿಸಿದರು.

ಚಾಮರಾಜನಗರ ಬಂದ್‌
ತಮಿಳುನಾಡಿಗೆ ನೀರು ಬಿಡುವುದನ್ನು ವಿರೋಧಿಸಿ ಮೈಸೂರು, ಚಾಮರಾಜನಗರ, ಮಂಡ್ಯ ಜಿಲ್ಲೆಯಲ್ಲಿ ನಡೆಯುತ್ತಿರುವ ಪ್ರತಿಭಟನೆ ಕಾರ್ಯಕ್ರಮಗಳು ಮಂಗಳವಾರವೂ ಮುಂದುವರೆದಿದ್ದು, ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ಮಂಗಳವಾರ ಬಂದ್‌ ಆಚರಿಸಲಾಯಿತು. ಚಾಮರಾಜನಗರದಲ್ಲಿ ನಡೆದ ಬಂದ್‌ ಸಂಪೂರ್ಣ ಯಶಸ್ವಿಯಾಗಿದ್ದು, ಚಿತ್ರ ಮಂದಿರಗಳು, ಅಂಗಡಿ ಮುಂಗಟ್ಟು, ಶಾಲಾ ಕಾಲೇಜುಗಳು ಮುಚ್ಚಿದ್ದವು.

ಮೈಸೂರಿನ ಜನ ನಿಬಿಡ ವಾಣಿಜ್ಯ ಪ್ರದೇಶವಾದ ದೇವರಾಜ ಮಾರುಕಟ್ಟೆಯಲ್ಲಿನ ವರ್ತಕರು ಸ್ವಯಂ ಪ್ರೇರಣೆಯಿಂದ ತಮ್ಮ ಚಟುವಟಿಕೆಗಳನ್ನು ಸ್ಥಗಿತಗೊಳಿಸಿ ಪ್ರತಿಭಟನೆ ವ್ಯಕ್ತಪಡಿಸಿದರು.

ಮಂಡ್ಯದಲ್ಲಿ ನೂರಾರು ಸಂಘಟನೆಗಳ ಸಹಸ್ರಾರು ಮಂದಿ ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಜಯಲಲಿತಾ ಪ್ರತಿಕೃತಿ ದಹನ, ಮೆರವಣಿಗೆ, ರಸ್ತೆ ತಡೆ ಕಾರ್ಯಕ್ರಮಗಳು ಮುಂದುವರೆದವು.

ಮುಖ್ಯಮಂತ್ರಿಗೆ ಸಂಸದರ ಬೆಂಬಲ
ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಕೈಗೊಳ್ಳುವ ಎಲ್ಲ ಕ್ರಮಗಳನ್ನು ಬೆಂಬಲಿಸಲು ರಾಜ್ಯದ ಸಂಸದರು ಪಕ್ಷ ಭೇದ ಮರೆತು ಒಂದಾಗಿದ್ದಾರೆ. ಮಂಗಳವಾರ ಬೆಳಗ್ಗೆ ಕೃಷ್ಣ ಅವರ ಗೃಹ ಕಚೇರಿಯಲ್ಲಿ ನಡೆದ ರಾಜ್ಯದ ಸಂಸದರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು ಎಂದು ಮಾಜಿ ಮುಖ್ಯಮಂತ್ರಿ ಎಸ್‌.ಬಂಗಾರಪ್ಪ ರಾಜ್ಯದ ಸಂಸದರ ಪರವಾಗಿ ಸುದ್ದಿಗಾರರಿಗೆ ತಿಳಿಸಿದರು.

ನದಿ ನೀರಿಗೆ ರೈತರ ಕಾವಲು
ಕಬಿನಿ ಜಲಾಶಯದಿಂದ ತಮಿಳುನಾಡಿಗೆ ಕದ್ದು ಮುಚ್ಚಿ ನೀರು ಹರಿಸಬಹುದೆನ್ನುವ ಸಂಶಯದಿಂದ ರಾಜ್ಯದ ರೈತರು ಕಾವಲು ಕಾರ್ಯಕ್ರಮ ಆರಂಭಿಸಿದ್ದಾರೆ. ಆಗತ್ತೂರು, ಸಾಗರೆ, ಇಟ್ನಾ, ತುಂಬ ಸೋಗೆ, ಸರಗೂರು, ಹೆಬ್ಬಲ ಗುಪ್ಪೆ ಮುಂತಾದ ಗ್ರಾಮಗಳ ರೈತರು ಸೋಮವಾರ ರಾತ್ರಿಯಿಡೀ ನೀರಿನ ಕಾವಲಿನಲ್ಲಿ ಭಾಗವಹಿಸಿದ್ದರು.

(ಇನ್ಫೋ ವಾರ್ತೆ)

ಮುಖಪುಟ / ಕಾವೇರಿ ಕನ್ನಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X