ಗುಜರಾತ್ನಲ್ಲಿ ದೇವಸ್ಥಾನದ ಮೇಲೆ ಭಯೋತ್ಪಾದಕರ ದಾಳಿ : 30 ಜನರ ಹತ್ಯೆ
ಗಾಂಧಿನಗರ : ಕೋಮುಗಲಭೆಗಳಿಂದ ತಲ್ಲಣಗೊಂಡಿದ್ದ ಗುಜರಾತ್ ಮೇಲೆ ಮತ್ತೆ ಆತಂಕ ಬಂದೆರಗಿದೆ. ಭಯೋತ್ಪಾದಕರು ಇಲ್ಲಿನ ಪ್ರಸಿದ್ಧ ಸ್ವಾಮಿನಾರಾಯಣ್ ದೇವಸ್ಥಾನದ ಮೇಲೆ ಇಂದು ಸಾಯಂಕಾಲ ದಾಳಿ ನಡೆಸಿದ್ದು ಕನಿಷ್ಟ 30 ಜನ ಹತ್ಯೆಗೀಡಾಗಿದ್ದಾರೆ.
ಸಂಜೆ 5.20ರ ಸುಮಾರಿಗೆ ಎಕೆ 47 ಮತ್ತು ಗ್ರೆನೇಡ್ಗಳನ್ನು ಹೊಂದಿದ್ದ ಶಂಕಿತ ಭಯೋತ್ಪಾದಕರು ನುಗ್ಗಿ ದೇವಸ್ಥಾನದಲ್ಲಿದ್ದ ಭಕ್ತರ ಮೇಲೆ ಮನಬಂದಂತೆ ಗುಂಡು ಹಾರಿಸಿದ್ದಾರೆ. ಸತ್ತವರಲ್ಲಿ 6 ಜನ ಮಹಿಳೆಯರು ಮತ್ತು 4 ಮಕ್ಕಳು ಸೇರಿದ್ದಾರೆ. 50ಕ್ಕೂ ಹೆಚ್ಚು ಜನ ಗಾಯಗೊಂಡಿದ್ದು, ಸತ್ತವರ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆಯಿದೆ ಎಂದು ಸರ್ಕಾರಿ ವಕ್ತಾರ ಪುರುಷೋತ್ತಮ ಅವರು ತಿಳಿದುಬಂದಿದೆ.
ಪೋಲೀಸರು ದೇವಸ್ಥಾನವನ್ನು ಸುತ್ತುವರಿದಿದ್ದು, ಒಳಗೆ ಸಿಕ್ಕಿಹಾಕಿಕೊಂಡಿರುವ ಜನರನ್ನು ಸುರಕ್ಷಿತವಾಗಿ ಹೊರತರುವಲ್ಲಿ ನಿರತರಾಗಿದ್ದಾರೆ. ಖಾಕಿ ಯೂನಿಫಾರ್ಮ ಧರಿಸಿದ್ದ ಆತಂಕವಾದಿಗಳು ಇನ್ನೂ ದೇವಸ್ಥಾನದ ಒಳಗೆ ಇರುವ ಸಂಭವವಿದೆ. ಈ ಘಟನೆ ನಡೆದ ನಂತರ ತಕ್ಷಣ ನಗರದ ಎಲ್ಲ ದೇವಸ್ಥಾನಗಳನ್ನು ಮುಚ್ಚಲಾಗಿದ್ದು, ಭದ್ರತೆಯನ್ನು ಒದಗಿಸಲಾಗಿದೆ.
ನ್ಯಾಷನಲ್ ಸೆಕ್ಯುರಿಟಿ ಗಾರ್ಡ್ನ ಕಮಾಂಡೊಗಳು ದೆಹಲಿಯಿಂದ ಆಗಮಿಸಿದ್ದು, ಪರಿಸ್ಥಿತಿಯನ್ನು ಅಧ್ಯಯನ ನಡೆಸಿದ ನಂತರ ರಾತ್ರಿ ವೇಳೆಯಲ್ಲಿ ಭಯೋತ್ಪಾದಕರ ಮೇಲೆ ದಾಳಿ ನಡೆಸುವ ಸಂಭವವಿದೆ. ಕಮಾಂಡೋಗಳು ಇಂಥ ಪರಿಸ್ಥಿಯನ್ನು ಎದುರಿಸುವಲ್ಲಿ ನಿಷ್ಣಾತರಾಗಿದ್ದು, ರಾತ್ರಿ ದಾಳಿ ನಡೆಸಲು ಅತ್ಯಂತ ಸುಸಜ್ಜಿತವಾದ ಸಲಕರಣೆಗಳನ್ನು ಹೊಂದಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಕೇಂದ್ರ ಗೃಹಸಚಿವ ಎಲ್.ಕೆ. ಅಡ್ವಾಣಿಯವರ ಲೋಕಸಭಾ ಕ್ಷೇತ್ರವಾದ ಅಕ್ಷಯಧಾಮ ಪ್ರದೇಶದಲ್ಲಿ ಸ್ವಾಮಿನಾರಾಯಣ ದೇವಸ್ಥಾನ ಇದೆ ಮತ್ತು ಅದರ ಸುತ್ತಮುತ್ತ ರಾಜ್ಯದ ಪ್ರಮುಖ ಮಂತ್ರಿಗಳು ವಾಸಿಸುತ್ತಿದ್ದಾರೆ.
ಕೋಮು ಗಲಭೆ ಆತಂಕ
ದೇವಸ್ಥಾನದ ಮೇಲೆ ನಡೆದಿರುವ ದಾಳಿಯನ್ನು ಮುಸ್ಲಿಂ ಮುಖಂಡರು ತೀವ್ರವಾಗಿ ಖಂಡಿಸಿದ್ದಾರೆ ಮತ್ತು ದಾಳಿಯಲ್ಲಿ ಯಾವುದೇ ಕೋಮಿನ ಕೈವಾಡವನ್ನು ಅಲ್ಲಗಳೆದಿದ್ದಾರೆ. ರಾಜ್ಯದ ಮಾಜಿ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ರಥ ಯಾತ್ರೆಯ ಸಮಯದಲ್ಲಿಯೇ ದಾಳಿ ನಡೆದಿರುವುದರಿಂದ ರಾಜ್ಯದಲ್ಲಿ ತೀವ್ರವಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಘಟನೆ ಕುರಿತಂತೆ ಯಾವುದೇ ಹೇಳಿಕೆ ನೀಡದಂತೆ ಬಿಜೆಪಿ ತನ್ನ ಪಕ್ಷದ ಮುಖಂಡರಿಗೆ ತಾಕೀತು ಮಾಡಿದೆ.
ಮುಖಪುಟ / ಇವತ್ತು... ಈ ಹೊತ್ತು...