ಕಟಕಟೆಯಲ್ಲಿ ಕಾವೇರಿ: ಎಸ್ಸೆಂ.ಕೃಷ್ಣರಿಗೆ ಸುಪ್ರಿಂಕೋರ್ಟ್ ನೋಟಿಸ್
ನವ ದೆಹಲಿ : ಕಾವೇರಿ ನೀರು ಬಿಡುಗಡೆ ಸಂಬಂಧ ಅಪೆಕ್ಸ್ ಕೋರ್ಟ್ ಹಾಗೂ ಕಾವೇರಿ ನದಿ ಪ್ರಾಧಿಕಾರದ ಆದೇಶ ಉಲ್ಲಂಘಿಸಿರುವ ಕರ್ನಾಟಕದ ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ನ್ಯಾಯಾಂಗ ನಿಂದನೆ ಮಾಡಿದ್ದಾರೆ ಎನ್ನುವ ತಮಿಳುನಾಡಿನ ಅರ್ಜಿಯ ವಿಚಾರಣೆಯನ್ನು ಪ್ರಾರಂಭಿಸಿದ ಸುಪ್ರಿಂ ಕೋರ್ಟ್, ಕೃಷ್ಣ ಅವರಿಗೆ ನೋಟಿಸ್ ಜಾರಿ ಮಾಡಿದೆ.
ಮುಖ್ಯ ನ್ಯಾಯಮೂರ್ತಿ ಬಿ.ಎನ್.ಕೃಪಾಲ್ ನೇತೃತ್ವದ ಮೂವರು ಸದಸ್ಯರ ನ್ಯಾಯಪೀಠ ನ್ಯಾಯಾಂಗ ನಿಂದನೆ ಆರೋಪದ ಕುರಿತು ಸೆಪ್ಟಂಬರ್ 30 ರೊಳಗೆ ವಿವರಣೆ ನೀಡುವಂತೆ ಕರ್ನಾಟಕದ ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಅವರಿಗೆ ಸೋಮವಾರ (ಸೆ.23) ನೋಟಿಸ್ ನೀಡಿತು. ಕೆ.ಜಿ.ಬಾಲಕೃಷ್ಣನ್ ಹಾಗೂ ಅರಿಜಿತ್ ಪಸ್ಯತ್ ತ್ರಿಸದಸ್ಯ ಪೀಠದಲ್ಲಿನ ಇತರ ನ್ಯಾಯಮೂರ್ತಿಗಳು.
ನ್ಯಾಯಪೀಠ ನೀಡಿದ ಮತ್ತೊಂದು ಪ್ರಮುಖ ಸೂಚನೆಯಲ್ಲಿ - ಸೆಪ್ಟಂಬರ್ 27 ರ ಒಳಗೆ ಮೆಟ್ಟೂರು ಜಲಾಶಯಕ್ಕೆ ಹರಿಯುವ ನೀರಿನ ಹರಿವಿನ ಕುರಿತು ಪ್ರಮಾಣ ಪತ್ರ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ತಿಳಿಸಿತು.
ಕರ್ನಾಟಕದ ಜಲ ಸಂಪನ್ಮೂಲ ಸಚಿವ ಎಚ್.ಕೆ.ಪಾಟೀಲ್, ಕರ್ನಾಟಕದ ಮುಖ್ಯ ಕಾರ್ಯದರ್ಶಿ ಹಾಗೂ ರಾಜ್ಯದ ಜಲ ಸಂಪನ್ಮೂಲಗಳ ಕಾರ್ಯದರ್ಶಿ ಅವರಿಗೂ ಸುಪ್ರಿಂಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
(ಪಿಟಿಐ)
ಮುಖಪುಟ / ಕಾವೇರಿ ಕನ್ನಡಿ