ಆಲಮಟ್ಟಿಯಿಂದ ನಮಗೂ ನೀರು ಬೇಕು -ಚಂದ್ರಬಾಬು ನಾಯ್ಡು
ಹೈದರಾಬಾದ್ : ರಾಜ್ಯದ ಜಲಾಶಯಗಳಲ್ಲಿ ಸಾಕಷ್ಟು ನೀರಿಲ್ಲ ಅಂತ ರಾಜಕಾರಣಿಯಾದಿಯಾಗಿ ರೈತರೆಲ್ಲ ಬೊಬ್ಬೆ ಹೊಡೆಯುತ್ತಿದ್ದರೆ ಅತ್ತ ಹೈದರಾಬಾದ್ನಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೊಸ ನಿರ್ಧಾರವೊಂದನ್ನು ಕೈಗೊಂಡಿದ್ದಾರೆ. ಬರಪರಿಸ್ಥಿತಿಯನ್ನು ಎದುರಿಸುತ್ತಿರುವ ಆಂದ್ರಪ್ರದೇಶಕ್ಕೆ ಆಲಮಟ್ಟಿ ಅಣೆಕಟ್ಟಿನಿಂದ ನೀರು ಬಿಡುವಂತೆ ಕರ್ನಾಟಕ ಸರಕಾರವನ್ನು ಕೋರಲು ನಾಯ್ಡು ನಿರ್ಧರಿಸಿದ್ದಾರೆ.
ಕೆಲ ದಿನಗಳ ಹಿಂದೆಯಷ್ಟೇ ಆಲಮಟ್ಟಿ ಜಲಾಶಯ ಭರ್ತಿಯಾಗಿತ್ತು. ಆಲಮಟ್ಟಿಯಲ್ಲಿರುವ ನೀರಿನ ಪೂರ್ಣ ಉಪಯೋಗವನ್ನು ಕರ್ನಾಟಕ ಮಾಡುತ್ತಿಲ್ಲ. ಈ ಅಣೆಕಟ್ಟಿನಿಂದ ರಾಯಲಸೀಮೆಯ ರೈತರಿಗೆ ನೀರು ಬಿಡುವಂತೆ ಕರ್ನಾಟಕವನ್ನು ಕೋರಲಾಗುವುದು ಎಂದು ಚಂದ್ರಬಾಬು ನಾಯ್ಡು ಭಾನುವಾರದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕರ್ನಾಟಕದಲ್ಲಿ ಈಗಾಗಲೇ ಕಾವೇರಿರುವ ಕಾವೇರಿ ಚಳವಳಿಯ ಬಗೆಗಿನ ಪ್ರಶ್ನೆಗೆ ಉತ್ತರಿಸಿದ ನಾಯ್ಡು, ನಾವು ಆಲಮಟ್ಟಿಯಿಂದ ನೀರು ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ. ರಾಯಲಸೀಮೆಗೆ ನೀರು ಬಿಡುವಂತೆ ನಮ್ಮ ಮನವಿಯನ್ನು ಕರ್ನಾಟಕದ ಮುಂದಿಡುತ್ತೇವೆ ಎಂದರು.
ಈ ಕುರಿತು ಕರ್ನಾಟಕ ಸರಕಾರಕ್ಕೆ ಪತ್ರ ಬರೆಯುವ ಮುನ್ನ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ ನಿರ್ಧರಿಸಲಾಗುವುದು ಎಂದ ನಾಯ್ಡು ಗಂಗಾ ಕಾವೇರಿ ಸಂಪರ್ಕ ಯೋಜನೆಯನ್ನು ಸಮರ್ಥಿಸಿದರು.
(ಪಿಟಿಐ)
Post Your Views
ಮುಖಪುಟ / ಇವತ್ತು... ಈ ಹೊತ್ತು...