ಶ್ರೀನಾಥ್ರತ್ತ ಆಯ್ಕೆಗಾರರ ಮಂಡಳಿ ಅಧ್ಯಕ್ಷ ಬ್ರಿಜೇಷ್ ಪಟೇಲ್ ಕಣ್ಣು
ನವದೆಹಲಿ : ತವರು ನೆಲದಲ್ಲಿ ನಡೆಯುವ ವೆಸ್ಟಿಂಡೀಸ್ ವಿರುದ್ಧದ ಸರಣಿಯಲ್ಲಿ ಮೈಸೂರು ಎಕ್ಸ್ಪ್ರೆಸ್ ಜಾವಗಲ್ ಶ್ರೀನಾಥ್ ಆಡುವ ವಿಶ್ವಾಸವನ್ನು ಭಾರತೀಯ ಕ್ರಿಕೆಟ್ ತಂಡದ ಆಯ್ಕೆಗಾರರ ಮಂಡಳಿಯ ನೂತನ ಅಧ್ಯಕ್ಷ ಬ್ರಿಜೇಷ್ ಪಟೇಲ್ ವ್ಯಕ್ತಪಡಿಸಿದ್ದಾರೆ.
ಟೆಸ್ಟ್ ಪಂದ್ಯಗಳಲ್ಲಿ ಮತ್ತೆ ಆಡುವಂತೆ ಶ್ರೀನಾಥ್ ಅವರ ಮನವೊಲಿಸಲು ಪ್ರಯತ್ನಿಸುತ್ತೇನೆ ಎಂದು ಐವರು ಸದಸ್ಯರ ಆಯ್ಕೆಗಾರರ ಮಂಡಳಿಯ ಅಧ್ಯಕ್ಷರಾಗಿ ನಿಯೋಜಿತರಾಗಿರುವ ಬ್ರಿಜೇಷ್ ಪಟೇಲ್, ಶುಕ್ರವಾರ (ಸೆ.20) ಸುದ್ದಿಗಾರರಿಗೆ ತಿಳಿಸಿದರು.
ಕಳೆದ ಜೂನ್ ತಿಂಗಳಲ್ಲಿ ನಡೆದ ವೆಸ್ಟಿಂಡೀಸ್ ವಿರುದ್ಧದ ಸರಣಿಯ ನಂತರ ಟೆಸ್ಟ್ ಕ್ರಿಕೆಟ್ಗೆ ವಿದಾಯ ಘೋಷಿಸಿದ್ದ ಶ್ರೀನಾಥ್- ದಕ್ಷಿಣ ಆಫ್ರಿಕಾದಲ್ಲಿ ನಡೆಯುವ ವಿಶ್ವಕಪ್ನತ್ತ ತಮ್ಮ ಸಂಪೂರ್ಣ ಗಮನವನ್ನು ಕೇಂದ್ರೀಕರಿಸುವುದಾಗಿ ಹೇಳಿದ್ದರು. ಇತ್ತೀಚಿನ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಸಂದರ್ಭದಲ್ಲಿ ಟೆಸ್ಟ್ ಆಡುವಂತೆ ಭಾರತೀಯ ಕ್ರಿಕೆಟ್ ತಂಡದ ನಾಯಕ ಸೌರವ್ ಗಂಗೂಲಿ ಪದೇ ಪದೇ ಮಾಡಿಕೊಂಡ ಮನವಿಯನ್ನು ಶ್ರೀನಾಥ್ ತಿರಸ್ಕರಿಸಿದ್ದರು.
ವೇಗದ ಬೌಲರ್ಗಳಿಗೆ ಅನುಕೂಲಕರವಾದ ಪಿಚ್ಗಳಲ್ಲಿ ಭಾರತದ ವೇಗದ ಬೌಲರ್ಗಳಾದ ಜಹೀರ್ ಖಾನ್, ಅಜಿತ್ ಅಗರ್ಕರ್ ಹಾಗೂ ಆಶಿಷ್ ನೆಹ್ರಾ ತಿಣುಕಾಡಿದ್ದರ ಹಿನ್ನೆಲೆಯಲ್ಲಿ ಶ್ರೀನಾಥ್ ಅವರತ್ತ ಮತ್ತೆ ಕ್ರಿಕೆಟ್ ಪ್ರಿಯರ ಗಮನ ಹರಿದಿದೆ.
ಕಪಿಲ್ದೇವ್ ನಂತರ ಅತ್ಯಂತ ಹೆಚ್ಚು ವಿಕೆಟ್ಗಳನ್ನು (232) ಪಡೆದಿರುವ ಭಾರತೀಯ ವೇಗದ ಬೌಲರ್ ಎನ್ನುವ ಖ್ಯಾತಿ ಶ್ರೀನಾಥ್ ಅವರದ್ದಾಗಿದೆ. ಪ್ರಸ್ತುತ ಇಂಗ್ಲೆಂಡ್ನ ಕೌಂಟಿ ಕ್ರಿಕೆಟ್ನಲ್ಲಿ ಶ್ರೀನಾಥ್ ಆಡುತ್ತಿದ್ದಾರೆ. ಇತ್ತೀಚೆಗೆ ಲೈಸೆಸ್ಸ್ಟರ್ ಪರ ಪಂದ್ಯ ಆಡಿದ ಶ್ರೀನಾಥ್, ಚಾಂಪಿಯನ್ ಸರ್ರೆ ತಂಡದ ನಾಲ್ವರು ಬ್ಯಾಟ್ಸ್ಮನ್ಗಳನ್ನು ಏಳು ಚೆಂಡುಗಳಲ್ಲಿ (ಹ್ಯಾಟ್ರಿಕ್ ಸೇರಿದಂತೆ) ವಾಪಸ್ಸು ಕಳಿಸುವ ಮೂಲಕ ತಮ್ಮ ಸಾಮರ್ಥ್ಯ ಸಾಬೀತು ಪಡಿಸಿದ್ದರು.
(ಏಜೆನ್ಸೀಸ್)
ಮುಖಪುಟ / ಇವತ್ತು... ಈ ಹೊತ್ತು...