ಅಂತೂ ಇಂತೂ ಮಂಗಳೂರು ಐಟಿ ಪಾರ್ಕ್ ಉದ್ಘಾಟನೆಗೊಂಡಿತು !
ಮಂಗಳೂರು : ಭಾರತವನ್ನು ಐಟಿ ಸೂಪರ್ ಪವರ್ ರಾಷ್ಟ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿಯೂ ಐಟಿ ಪಾರ್ಕ್ಗಳನ್ನು ಸ್ಥಾಪಿಸಬೇಕು ಎಂದು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಪ್ರಮೋದ್ ಮಹಾಜನ್ ಅಭಿಪ್ರಾಯಪಟ್ಟಿದ್ದಾರೆ.
ಅವರು ಮಂಗಳೂರಿನಲ್ಲಿ ಭಾರತೀಯ ಮಾಹಿತಿ ತಂತ್ರಜ್ಞಾನ ಪಾರ್ಕ್ ಉದ್ಘಾಟಿಸಿ ಮಾತನಾಡುತ್ತಿದ್ದರು. ಐಟಿ ಸೂಪರ್ ಪವರ್ ಅಂತ ಗುರುತಿಸಿಕೊಳ್ಳಬೇಕಿದ್ದರೆ ನಮ್ಮ ದೇಶ 2008ರ ಹೊತ್ತಿಗೆ 50 ಶತ ಕೋಟಿ ಡಾಲರ್ ಮೌಲ್ಯದ ಸಾಪ್ಟ್ವೇರ್ನ್ನು ರಫ್ತು ಮಾಡಬೇಕಾಗುತ್ತದೆ. ಈ ಗುರಿ ತಲುಪಲು ಹೆಚ್ಚು ಮಾನವ ಸಂಪನ್ಮೂಲ ಅಗತ್ಯವಿರುವುದರಿಂದ ಮುಂದಿನ ವರ್ಷದಿಂದ ಎಂಜಿನಿಯರಿಂಗ್ ಕಾಲೇಜುಗಳ ಸೀಟುಗಳನ್ನು ಹೆಚ್ಚಿಸಲಾಗುವುದು ಎಂದು ಸಚಿವರು ಹೇಳಿದರು.
ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶ್ವವು ಭಾರತವನ್ನು ಜಗದ್ಗುರು ಅಂತ ಒಪ್ಪಿಕೊಂಡಿದೆ. ಕಳೆದೆರಡು ವರ್ಷಗಳಲ್ಲಿ ನಮ್ಮ ಸಾಧನೆ ಉತ್ತಮವಾಗಿದ್ದರೂ ಅಂತರರಾಷ್ಟ್ರೀಯ ಗುಣಮಟ್ಟವನ್ನು ತಲುಪುವಲ್ಲಿ ನಮ್ಮ ದೇಶ ವಿಫಲವಾಗಿದೆ ಎಂದು ಮಹಾಜನ್ ವಿಷಾದಿಸಿದರು.
ಮಂಗಳೂರಿನ ಸಾಫ್ಟ್ವೇರ್ ಪಾರ್ಕ್, ಉದ್ಘಾಟನೆಗೆ ಮೊದಲೇ 300 ಕೋಟಿ ರೂ. ಮೊತ್ತದ ಸಾಫ್ಟ್ವೇರ್ ರಫ್ತು ಮಾಡಿದೆ. ಇದೇ ಗತಿಯಲ್ಲಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಮಂಗಳೂರು, ಬೆಂಗಳೂರನ್ನು ಹಿಂದೆ ಹಾಕುವುದರಲ್ಲಿ ಸಂಶಯವಿಲ್ಲ ಎಂದು ಸಮಾರಂಭದಲ್ಲಿ ಭಾಗವಹಿಸಿದ್ದ ಕೇಂದ್ರ ನಗರಾಭಿವೃದ್ಧಿ ಸಚಿವ ಅನಂತ ಕುಮಾರ್ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ಕರ್ನಾಟಕ ಸಿಲಿಕಾನ್ ಕಣಿವೆ