ರಾಜ್ಯದಲ್ಲಿ ಮಳೆ ಬಂದಿಲ್ಲ ಎಂದು ಯಾರನ್ನು ಕೇಳಲಿ - ಎಸ್ಸೆಂ.ಕೃಷ್ಣ
ಬೆಂಗಳೂರು : ರಾಜ್ಯದಲ್ಲಿ ಬರ ತಲೆದೋರಿದೆ. ಆದರೆ ಮಳೆ ಬಂದಿಲ್ಲ ಎಂದು ಯಾರನ್ನು ಕೇಳುವುದು? ಕೇಂದ್ರ ಸರ್ಕಾರವನ್ನು ಕೇಳುವುದಾ? ಕಾವೇರಿ ನದಿ ಪ್ರಾಧಿಕಾರವನ್ನು ಕೇಳುವುದಾ? ಅಥವಾ ತಮಿಳುನಾಡು ಸರ್ಕಾರವನ್ನು ಕೇಳುವುದಾ?
ಕಾವೇರಿ ನೀರು ಹಂಚಿಕೆ ಕುರಿತಂತೆ ಭುಗಿಲೆದ್ದಿರುವ ಸಮಸ್ಯೆಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿನ ಅಸಹಾಯಕ ಪರಿಸ್ಥಿತಿಯನ್ನು ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಬಣ್ಣಿಸಿದ್ದು ಹೀಗೆ. ಅವರು ಶುಕ್ರವಾರ (ಸೆ.20) ಬೆಂಗಳೂರು ಹೊರ ವಲಯದ ಕೊತ್ತನೂರು ದಿಣ್ಣೆಯ ಜಲ ಸಂಗ್ರಹಾಗಾರದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ - ಬೆಂಗಳೂರು ನಗರಕ್ಕೆ ಕುಡಿಯುವ ನೀರನ್ನು ಪೂರೈಸುವ ಕಾವೇರಿ ನೀರು ಸರಬರಾಜಿನ 4 ನೇ ಹಂತದ 1 ನೇ ಘಟ್ಟದ ಯೋಜನೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಕಾವೇರಿ ನೀರು ನಮ್ಮನ್ನು ತಂಪು ಮಾಡಬೇಕಿತ್ತು . ಆದರೆ, ನೀರು ಬಿಸಿಯಾಗಿದೆ. ಈ ಗಂಭೀರ ಪರಿಸ್ಥಿತಿಯನ್ನು ಎದುರಿಸುವ ಶಕ್ತಿಯನ್ನು ಜನ ಪಡೆಯಬೇಕು ಎಂದು ಕೃಷ್ಣ ಆಶಿಸಿದರು.
ಉಪ್ಪನ್ನು ಹುಡುಕಿಕೊಂಡು ಸಮುದ್ರಕ್ಕೆ ಹೋಗುತ್ತೇವೆ. ಅಲ್ಲಿ ಉಪ್ಪಿಲ್ಲದಿದ್ದರೆ ಹುಡುಕಾಟ ವ್ಯರ್ಥವಾಗುತ್ತದೆ. ಪ್ರಕೃತಿದತ್ತವಾಗಿ ಕಾವೇರಿಯಲ್ಲಿ ನೀರು ಹರಿಯುವವರೆಗೂ ಪರಿಸ್ಥಿತಿ ತಿಳಿಯಾಗುವಂತೆ ಕಾಣುತ್ತಿಲ್ಲ ಎಂದು ಕೃಷ್ಣ ಹೇಳಿದರು. ಒಂದು ರಾಜ್ಯ ಸಂಕಷ್ಟದಲ್ಲಿದ್ದಾಗ ಇನ್ನೊಂದು ರಾಜ್ಯ ಅರ್ಥ ಮಾಡಿಕೊಳ್ಳಬೇಕು ಎಂದು ನೆರೆಯ ತಮಿಳುನಾಡಿಗೆ ಕೃಷ್ಣ ತಿಳಿ ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...