ಕುಶಾಲನಗರದ ರೈತರಿಗೆ ಕಾಡಿದ ಅಭದ್ರತೆ, ಹಾರಂಗಿಗೆ ಮುತ್ತಿಗೆ
ಕುಶಾಲನಗರ: ರಾಜ್ಯದಲ್ಲಿ ಕಬಿನಿ ಮತ್ತು ಕೆಆರ್ಎಸ್ ಜಲಾಶಯಗಳ ಮುಂದೆ ರೈತರು ಪ್ರತಿಭಟನೆ, ಹೋರಾಟಗಳನ್ನು ನಡೆಸುತ್ತಿರುವಂತೆಯೇ ಇತ್ತ ಕೊಡಗಿನ ರೈತರೂ ಎಚ್ಚೆತ್ತುಕೊಂಡಿದ್ದಾರೆ.
ಕಾವೇರಿ ಹೋರಾಟದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಜಲಾಶಯಗಳಿಗೂ ಬಿಗಿ ಭದ್ರತೆ ಒದಗಿಸಲಾಗಿದೆ. ಜಲಾಶಯಕ್ಕೆ ಭದ್ರತೆ ಹೆಚ್ಚಿಸಿದಷ್ಟೂ ರೈತರ ಮನಸ್ಸಿನಲ್ಲಿ ಅಭದ್ರತೆ ಹೆಚ್ಚುತ್ತಿದೆ. ಕೊಡಗಿನ ಕುಶಾಲನಗರದಲ್ಲಿರುವ ಹಾರಂಗಿ ಜಲಾಶಯಕ್ಕೂ ಹೆಚ್ಚಿನ ಭದ್ರತೆಯನ್ನು ಕಲ್ಪಿಸಿರುವ ಹಿನ್ನೆಲೆಯಲ್ಲಿ ರೈತರು ಆತಂಕಗೊಂಡಿದ್ದಾರೆ.
ಮಂಗಳವಾರ ಕುಶಾಲನಗರದ ರೈತರು ಜಿಲ್ಲಾ ಪಂಚಾಯತ್ ಸದಸ್ಯೆ ಕೆ. ಪಿ. ಚಂದ್ರಕಲಾ ನೇತೃತ್ವದಲ್ಲಿ ಇದ್ದಕ್ಕಿದ್ದ ಹಾಗೆಯೇ ಲಾರಿಗಳಲ್ಲಿ ಆಗಮಿಸಿ ಹಾರಂಗಿ ಆಣೆಕಟ್ಟು ವಲಯದ ನಿಷೇಧಿತ ಪ್ರದೇಶಕ್ಕೆ ನುಗ್ಗಿದರು. ಬಿದಿ ಭದ್ರತೆಯಲ್ಲಿ ಜಲಾಶಯದಿಂದ ಹೆಚ್ಚಿನ ನೀರು ಹೊರಗೆ ಹರಿದುಹೋಗುತ್ತಿರಬಹುದು ಎಂಬ ಸಂಶಯ ರೈತರದು. ಇದರಿಂದ ತಬ್ಬಿಬ್ಬುಗೊಂಡ ಪೊಲೀಸರು ಹಾರಂಗಿ ಜಲಾಶಯ ಕಚೇರಿಗೆ ನುಗ್ಗಿದ ನೂರಾರು ರೈತರನ್ನು ಬಂಧಿಸಿದರು. ಈ ಮಧ್ಯೆಚಂದ್ರಕಲಾ ಅವರು ಸೋಮವಾರ ಪೇಟೆ ತಹಸೀಲ್ದಾರ್ ತಮ್ಮಯ್ಯ ಅವರಿಗೆ ಮನವಿಯಾಂದನ್ನು ಸಲ್ಲಿಸಿ ತಮಿಳುನಾಡಿಗೆ ಕಾವೇರಿ ನೀರು ಹರಿಯ ಬಿಡಬಾರದು ಎಂದು ಆಗ್ರಹಿಸಿದರು.
ಪ್ರತಿಭಟನೆಯ ಸಂದರ್ಭದಲ್ಲಿ ರೈತರು ತಾವು ಹಾರಂಗಿಯ ವಸ್ತುಸ್ಥಿತಿಯನ್ನು ವೀಕ್ಷಿಸಲು ಬಂದಿದ್ದು, ಇಲ್ಲಿನ ಅತಿಯಾದ ಪೊಲೀಸ್ ಬಂದೋಬಸ್ತ್ ನೋಡಿ ಆತಂಕಗೊಂಡಿರುವುದಾಗಿಯೂ ಹೇಳಿದ್ದಾರೆ. ಬಂಧಿಸಿದ ರೈತರನ್ನು ಸಂಜೆ ವೇಳೆಗೆ ಬಿಡುಗಡೆ ಮಾಡಲಾಯಿತು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...