ಬಸ್ಸು-ರೈಲು ತಡೆಗೆ ವಿರಾಮ; ಜೈಲ್ ಭರೋ, ಮುತ್ತಿಗೆ ಮುಂದುವರಿಕೆ
ಮಂಡ್ಯ : ಪ್ರಯಾಣಿಕರ ಹಿತದೃಷ್ಟಿಯಿಂದ ರಸ್ತೆ ಹಾಗೂ ರೈಲು ತಡೆಯನ್ನು ಕೈ ಬಿಡಬೇಕೆಂದು ಮಂಡ್ಯ ಜಿಲ್ಲಾ ರೈತರ ಹಿತ ರಕ್ಷಣಾ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸಂಸದ ಜಿ.ಮಾದೇಗೌಡ ಪ್ರತಿಭಟನಾಕಾರರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಬಸ್ಸು ಹಾಗೂ ರೈಲು ತಡೆಯಿಂದ ಪ್ರಯಾಣಿಕರು ತೊಂದರೆಗೆ ಸಿಲುಕಿದ್ದಾರೆ. ಪ್ರಯಾಣಿಕರ ಹಿತದೃಷ್ಟಿಯಿಂದ ಸಂಚಾರಕ್ಕೆ ಅಡ್ಡಿ ಮಾಡುವುದನ್ನು ನಿಲ್ಲಿಸಬೇಕು ಎಂದು ಬುಧವಾರ (ಸೆ.18) ಸುದ್ದಿಗಾರರೊಂದಿಗೆ ಮಾತನಾಡಿದ ಮಾದೇಗೌಡ ಹೇಳಿದರು. ತಮಿಳುನಾಡಿಗೆ ನೀರು ಬಿಡುವುದನ್ನು ವಿರೋಧಿಸಿ ಮಂಡ್ಯ ಹಾಗೂ ಕಾವೇರಿ ಜಲಾನಯನ ಪ್ರದೇಶದ ಇತರ ಪ್ರದೇಶಗಳಲ್ಲಿ ಬಸ್ಸು ಹಾಗೂ ರೈಲುಗಳ ಸಂಚಾರಕ್ಕೆ ಪ್ರತಿಭಟನಕಾರರು ಅಡ್ಡಿ ಉಂಟು ಮಾಡಿದ್ದರು.
ಬಸ್ಸು ಹಾಗೂ ರೈಲು ತಡೆ ನಿಂತರೂ- ಜೈಲ್ ಭರೋ ಹಾಗೂ ಕರ ನಿರಾಕರಣೆ ಚಳವಳಿ ಮುಂದುವರಿಯಲಿದೆ. ಸರ್ಕಾರಿ ಕಚೇರಿಗಳಿಗೆ ಮುತ್ತಿಗೆ ಕಾರ್ಯಕ್ರಮವೂ ಮುಂದುವರಿಯಲಿದೆ ಎಂದು ಮಾದೇಗೌಡ ಸ್ಪಷ್ಟಪಡಿಸಿದರು.
ರೈತರ ಚಳವಳಿಯಲ್ಲಿ ತಾವು ಕೂಡ ಭಾಗಿಯಾಗುವುದಾಗಿ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಶಾಸಕ ಎಂ.ಎಸ್.ಆತ್ಮಾನಂದ ಹೇಳಿದರು. ಪ್ರಸ್ತುತ ನಡೆಯುತ್ತಿರುವ ಚಳವಳಿ ರೈತರಿಗೆ ಆಗುವ ಅನ್ಯಾಯದ ವಿರುದ್ಧವೇ ಹೊರತು ಸರ್ಕಾರದ ವಿರುದ್ಧ ಅಲ್ಲ ಎಂದು ಆತ್ಮಾನಂದ ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...