‘ನಾಗಪ್ಪನವರ ಕುಟುಂಬದೋರೆ ಯಾರಾದ್ರೂಸಂಧಾನಕಾರರ ಕಳಿಸಲಿ’
ಬೆಂಗಳೂರು : ರಾಜ್ಕುಮಾರ್ ಬಿಡುಗಡೆಗೆ ನೆಡುಮಾರನ್ ಸರ್ಕಾರಿ ಸಂಧಾನಕಾರರಾಗಿರಲಿಲ್ಲ. ಅವರನ್ನು ರಾಜ್ಕುಮಾರ್ ಕುಟುಂಬದವರೇ ಕಳಿಸಿದ್ದರು. ನಾಗಪ್ಪನವರ ಕುಟುಂಬಕ್ಕೆ ಈಗಲೂ ಯಾರಾದರೂ ಸಂಧಾನಕಾರರು ಗೊತ್ತಿದ್ದರೆ ಅಂಥವರನ್ನು ವೀರಪ್ಪನ್ ಹತ್ತಿರ ಕಳಿಸಬಹುದು ಎಂದು ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಎಲ್ಲಾ ಮುಗುಮ್ಮು : ಎಸ್ಟಿಎಫ್ ಕಾರ್ಯಾಚರಣೆ ಮಂದವಾದದ್ದು ಯಾತಕ್ಕೆ? ವೀರಪ್ಪನ್ ಶಿಕಾರಿ ಮಾಡಿಯೇ ನಾಗಪ್ಪನವರನ್ನು ಬಿಡಿಸಿ ತರುತ್ತೇನೆಂಬ ಠರಾವು ಯಾಕೆ ಬದಲಾಯಿತು? ಸಂಧಾನಕ್ಕೆ ಫಲ ಸಿಗುತ್ತದಾ? ಸಂಧಾನಕಾರರಾರು?.... ಇಂಥಾ ಪ್ರಶ್ನೆಗಳಿಗೆ ಖರ್ಗೆ ಕೊಡುವ ಉತ್ತರ ಮುಗುಮ್ಮು. ಸಂಧಾನಕಾರರ ಹುಡುಕಾಟದಲ್ಲಿದ್ದೇವೆ ಎಂದಷ್ಟೇ ಹೇಳುವರೇ ವಿನಃ ಎಸ್ಟಿಎಫ್ ಬಗ್ಗೆ ಏನೇನೂ ಹೇಳೋದಿಲ್ಲ. ಅದು ಎಸ್ಟಿಎಫ್ ಅಧಿಕಾರಿಗಳಿಗೆ ಬಿಟ್ಟಿರುವ ವಿಷಯ ಅಂದುಬಿಡುತ್ತಾರೆ. ಜೈಲಿನಲ್ಲಿರುವವರನ್ನು ಸಂಧಾನಕ್ಕೆ ಕಳುಹಿಸುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಹೇಳಿರುವ ಮಾತನ್ನೇ ಪುನರುಚ್ಚರಿಸುತ್ತಾರೆ.
ನಾನು ಬರೋದಿಲ್ಲ- ಮಣಿ : ಸಂಧಾನಕ್ಕೆ ಬರಬೇಕೆಂದು ವೀರಪ್ಪನ್ ಕೊಟ್ಟಿರುವ ಆಮಂತ್ರಣವನ್ನು ಕೊಳತ್ತೂರು ಮಣಿ ಒಪ್ಪಿಕೊಂಡಿಲ್ಲ. ನಾನು ಸಂಧಾನಕ್ಕೆ ಬರಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ.
ಹೀಗಿದ್ದೂ ಕೊಳತ್ತೂರು ಮಣಿಯೇ ಸಂಧಾನಕಾರರಾಗಿ ಕಾಡಿಗೆ ಹೋಗಲಿದ್ದಾರೆ ಎಂಬ ವಿಷಯ ಸರ್ಕಾರದ ತೆರೆಮರೆಯ ವಿದ್ಯಮಾನಗಳಿಂದ ಹೊರಬಿದ್ದಿದೆ. (ಇನ್ಫೋ ವಾರ್ತೆ)